ನವದೆಹಲಿ: ಯಾವುದೇ ಒಂದು ನಿರ್ದಿಷ್ಟ ವಿಧಿ, ಧಾರ್ಮಿಕ ಆಚರಣೆಗಳ ಅಗತ್ಯ ಅಥವಾ ಅನಗತ್ಯ ಭಾಗ ಎಂಬುದಾಗಿ ಗುರುತಿಸುವುದಕ್ಕೆ ಬೇಕಾದ ಮಾನದಂಡಗಳ ವ್ಯಾಖ್ಯಾನವು ನ್ಯಾಯಾಂಗಕ್ಕೆ ಅಸಾಧ್ಯವಲ್ಲದಿದ್ದರೂ, ಬಹಳ ಕಷ್ಟಕರ ಸಂಗತಿ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
'ಹಿಂದೂಗಳ ಒಂದು ನಿರ್ದಿಷ್ಟ ಧಾರ್ಮಿಕ ಪಂಗಡ ಕೆಲವು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದಲ್ಲಿ ಹಾಗೂ ಅವುಗಳು ನೈತಿಕತೆ, ಸಾರ್ವಜನಿಕ ವ್ಯವಸ್ಥೆ ಹಾಗೂ ಆರೋಗ್ಯಕ್ಕೆ ಧಕ್ಕೆ ತರುವಂತಿದ್ದಲ್ಲಿ ಅಂತಹ ಆಚರಣೆಗಳನ್ನು ಅಗತ್ಯ ಧಾರ್ಮಿಕ ವಿಧಿಗಳೆಂದು ಹೇಳಲಾಗದು' ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಒಂಬತ್ತು ಸದಸ್ಯರ ಸಂವಿಧಾನ ಪೀಠ ಹೇಳಿದೆ.
ಯಾವುದೇ ಒಂದು ಧರ್ಮದವರು ಅನುಸರಿಸುವ ಧಾರ್ಮಿಕ ಆಚರಣೆಗಳು ನೈತಿಕತೆ, ಸಾರ್ವಜನಿಕ ವ್ಯವಸ್ಥೆ ಹಾಗೂ ಆರೋಗ್ಯಕ್ಕೆ ಹಾನಿ ಉಂಟು ಮಾಡದೇ ಇದ್ದರೆ, ಅಂತಹ ಆಚರಣೆಗಳಿಗೆ ಸಂವಿಧಾನದಡಿ ರಕ್ಷಣೆ ಇದೆ. ಆದರೆ, ಯಾವುದೇ ಆಚರಣೆಯು 'ಅಗತ್ಯ' ಎಂಬ ಉಲ್ಲೇಖ ಸಂವಿಧಾನದಲ್ಲಿಲ್ಲ ಎಂದೂ ಪೀಠ ಹೇಳಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಸೇರಿ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರನ್ನು ತಾರತಮ್ಯದಿಂದ ನೋಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಅರ್ಜಿಗಳ ಕುರಿತು ಏಳನೇ ದಿನವೂ ನಡೆದ ವಿಚಾರಣೆ ವೇಳೆ ಪೀಠ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದ್ರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ ಕುಮಾರ್, ಆಗಸ್ಟೀನ್ ಜಾರ್ಜ್ ಮಸೀಹ್, ಪ್ರಸನ್ನ ಬಿ.ವರಾಳೆ, ಆರ್.ಮಹಾದೇವನ್ ಹಾಗೂ ಜಾಯ್ಮಾಲ್ಯಾ ಬಾಗ್ಚಿ ಈ ಪೀಠದಲ್ಲಿದ್ದಾರೆ.
ಮಧ್ಯಸ್ಥಿಕೆದಾರರ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ,'ಒಂದು ಪಂಗಡ ಅನುಸರಿಸುವ ಸಿದ್ಧಾಂತ ಅಥವಾ ನಂಬಿಕೆಗಳ ಆಧಾರದಲ್ಲಿ ಧರ್ಮವನ್ನು ವ್ಯಾಖ್ಯಾನಿಸಲಾಗದು. ಹೇಗೆ ಪೂಜಿಸಬೇಕು ಮತ್ತು ಯಾವಾಗ ಪೂಜಿಸಬೇಕು ಎಂಬುದನ್ನು ಆ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆವುಳ್ಳವರೇ ನಿರ್ಧರಿಸಬೇಕು. ಹೀಗಾಗಿ, ದಯವಿಟ್ಟು ಈ ವಿಷಯದಲ್ಲಿ ಹೊಸ ವಿಚಾರಗಳನ್ನು ತರಬಾರದು ಅಥವಾ ಹಳೆಯದನ್ನು ಬದಲಾಯಿಸಬಾರದು' ಎಂದು ಪೀಠಕ್ಕೆ ಅರುಹಿದರು.
'ಇಂತಹ ವಿಚಾರವನ್ನು ಒಂದು ಸಾಧನವನ್ನಾಗಿ ಬಳಸಬಾರದು. ಹೀಗಾಗದಲ್ಲಿ ಅದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ದೇವರನ್ನು ಹೇಗೆ ಆರಾಧಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಆಯಾ ಧಾರ್ಮಿಕ ಪಂಗಡಗಳಿಗೇ ಬಿಟ್ಟುಬಿಡಿ' ಎಂದು ಕೋರಿದರು.

