ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) 'ಶೀಘ್ರದಲ್ಲೇ' ಭಾರತದೊಂದಿಗೆ ಮತ್ತೆ ಏಕೀಕರಣಗೊಳ್ಳಲಿದೆ ಎಂದು ಆಲ್ ಇಂಡಿಯಾ ಇಮಾಮ್ ಸಂಘಟನೆ ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಶುಕ್ರವಾರ ಹೇಳಿದ್ದಾರೆ.
'ಕಾಶ್ಮೀರದಲ್ಲಿ ನಿಂತು ನಮ್ಮ ನೆರೆಯ ದೇಶಕ್ಕೆ ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ.
ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ ಖಂಡಿತವಾಗಿಯೂ ಭಾರತಕ್ಕೆ ಮತ್ತೆ ಸೇರುತ್ತದೆ. ಏಕೆಂದರೆ ಪಿಒಕೆ ಜನರು ಅಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಬಯಸುತ್ತಾರೆ' ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ದೇವರ ಇಚ್ಛೆಯಿದ್ದರೆ, ಅವರ 'ಘರ್ ವಾಪಸಿ' ಶೀಘ್ರದಲ್ಲೇ ನಡೆಯಲಿದೆ. ಅದನ್ನು ಬಯಸುವುದು ಅಲ್ಲಿನ ಜನರೇ. ಕಾಶ್ಮೀರದ ಅಭಿವೃದ್ಧಿಯನ್ನು ನೋಡಿ ಅವರು ಸಂತೋಷಪಡುತ್ತಾರೆ. ಇಂದು ಕಾಶ್ಮೀರ ಹೇಗೆ ಪ್ರಗತಿ ಹೊಂದುತ್ತಿದೆ ಎಂಬುದನ್ನು ನೋಡಿದರೆ, ಪಿಒಕೆ ಶೀಘ್ರದಲ್ಲೇ ಭಾರತದೊಂದಿಗೆ ಮತ್ತೆ ಸೇರಿಕೊಳ್ಳಲಿದೆ' ಎಂದು ಅವರು ಹೇಳಿದರು.
'370ನೇ ವಿಧಿಯನ್ನು ರದ್ದುಗೊಳಿಸಿದ ನಂತರ 'ರೂಪಾಂತರಗೊಂಡ' ಕಾಶ್ಮೀರವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಇದು ಹೊಸ ಕಾಶ್ಮೀರವಾಗಿದೆ. ಇಂದಿನ ಕಾಶ್ಮೀರ ಅತ್ಯುತ್ತಮವಾಗಿದೆ; ಎಲ್ಲೆಡೆ ಸಮೃದ್ಧಿ ಇದೆ ಮತ್ತು ಪ್ರವಾಸೋದ್ಯಮ ಹೆಚ್ಚಾಗಿದೆ. ಇಲ್ಲಿನ ಜನರು ಸಮೃದ್ಧರಾಗಿದ್ದಾರೆ. ಇಲ್ಲಿ ಯುವಕರು ಮತ್ತು ಮಕ್ಕಳು ಕಲ್ಲು ಎಸೆಯುತ್ತಿದ್ದ ಕಾಲವಿತ್ತು. ಇಂದು ಅವರ ಕೈಯಲ್ಲಿ ಪೆನ್ನುಗಳಿವೆ. ಅವರು ಅಧ್ಯಯನ ಮಾಡುತ್ತಿದ್ದಾರೆ' ಎಂದರು.
ಕಳೆದ ವರ್ಷ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿ 25 ಮಂದಿ ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸಿದ ಇಲ್ಯಾಸಿ, ಈ ಘಟನೆಯ ನಂತರ ಸ್ವಲ್ಪ ಸಮಯದವರೆಗೆ ಪ್ರವಾಸೋದ್ಯಮ ಕುಸಿದಿದೆ. ಆದರೆ ಜನರು ಈ ಪ್ರದೇಶಕ್ಕೆ ಭೇಟಿ ನೀಡಬೇಕು ಎಂದು ಒತ್ತಾಯಿಸಿದರು.
ಕಾಶ್ಮೀರದಲ್ಲಿ ಈಗ ಭಯದ ವಾತಾವರಣವಿಲ್ಲದ ಕಾರಣ ಎಲ್ಲರೂ ಭೇಟಿ ನೀಡಬೇಕು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಅವರು ತಿಳಿಸಿದರು.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕುರಿತು ಮಾತನಾಡಿದ ಅವರು, 'ಯುದ್ಧಗಳು ಎಲ್ಲರಿಗೂ ಹಾನಿ ಮಾಡುತ್ತವೆ; ಅವು ವಿನಾಶದ ಸಂಕೇತ. ಅದರಿಂದ ಯಾರಿಗೂ ಒಳಿತಾಗುವುದಿಲ್ಲ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಜಿ ಅವರ ಮೇಲೆ ನನಗೆ ಭರವಸೆ ಇದೆ ಮತ್ತು ದೇವರು ಬಯಸಿದರೆ, ಅವರು ಮಧ್ಯಸ್ಥಿಕೆ ವಹಿಸುತ್ತಾರೆ ಮತ್ತು ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ. ಶಾಂತಿ ಮತ್ತು ನೆಮ್ಮದಿ ಇರುತ್ತದೆ' ಎಂದು ಅವರು ಹೇಳಿದರು.

