ಶ್ರೀನಗರ: ನಿಷೇಧಿತ ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಐವರನ್ನು ಸ್ಥಳೀಯ ನ್ಯಾಯಾಲಯವು ಬುಧವಾರ 10 ದಿನ ಪೊಲೀಸರ ವಶಕ್ಕೆ ನೀಡಿದೆ. ಐವರಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಮೂವರು ಸ್ಥಳೀಯರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ನೇತೃತ್ವದ ಅಂತರರಾಜ್ಯ ಎಲ್ಇಟಿ ಜಾಲವನ್ನು ಪತ್ತೆಹಚ್ಚಿ, ಐವರನ್ನು ಬಂಧಿಸಲಾಗಿದೆ. 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತ ಕಾಶ್ಮೀರದ ಹೊರಗೂ ತನ್ನ ನೆಲೆಗಳನ್ನು ಸ್ಥಾಪಿಸಿದ್ದನು.
ಹುರೇರಾ ಜೊತೆಗೆ ಮತ್ತೊಬ್ಬ ಪಾಕಿಸ್ತಾನಿ ಭಯೋತ್ಫಾದಕ ಉಸ್ಮಾನ್ ಅಲಿಯಾಸ್ ಖುಬೈಬ್ ಮತ್ತು ಶ್ರೀನಗರ ನಿವಾಸಿಗಳಾದ ಮೊಹಮ್ಮದ್ ನಖೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾನನ್ನು ಮಂಗಳವಾರ ಬಂಧಿಸಲಾಯಿತು.
ಇವರ ಇತರ ಸಹಚರರು, ಹಣಕಾಸು ನೆರವು ನೀಡುವವರು, ಸಹಾಯಕರು ಮತ್ತು ಅಂತರ ರಾಜ್ಯ ಸಂಪರ್ಕಗಳನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿರುವುದರಿಂದ ಹಲವಾರು ಶಂಕಿತ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

