ಚೆನ್ನೈ: ತಮಿಳುನಾಡಿನ ಭ್ರಷ್ಟಾಚಾರ ವಿರೋಧಿ ಸರ್ಕಾರೇತರ ಸಂಸ್ಥೆಯಾದ 'ಅರಪ್ಪೂರ್ ಇಯಕ್ಕಂ', ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ಸುಮಾರು 150 ಸ್ಥಳಗಳಲ್ಲಿ 'ನನ್ನ ಮತ ಮಾರಾಟಕ್ಕಿಲ್ಲ' ಎಂಬ ಅಭಿಯಾನವನ್ನು ನಡೆಸಿತ್ತು. ರಾಜಕೀಯ ಪಕ್ಷಗಳಿಂದ ಹಣ ಪಡೆದು ಮತ ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು.
ಆದರೆ, ಈ ಬಾರಿಯ ವಿಧಾನಸಭೆ ಚುನಾವಣೆಯು ಇತಿಹಾಸದಲ್ಲೇ ಅತ್ಯಂತ ದುಬಾರಿ ಚುನಾವಣೆಗಳಲ್ಲಿ ಒಂದಾಗಿ ದಾಖಲಾಗಲಿದೆ ಎಂದು ಸಂಘಟನೆ ಆಘಾತ ವ್ಯಕ್ತಪಡಿಸಿದೆ. ಈ ಬಾರಿ ಹಣ ಮತ್ತು ಉಡುಗೊರೆಗಳು ನೀರಿನಂತೆ ಹರಿದಿವೆ ಎಂದು ಅದು ದೂರಿದೆ.
ಈ ಚುನಾವಣೆಯಲ್ಲಿ ಖರ್ಚು ಮಾಡಿದ ಹಣವು ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ ಎಂದು ಅರಪ್ಪೋರ್ ಇಯಕ್ಕಂನ ಜಯರಾಮ್ ವೆಂಕಟೇಶನ್ ಆರೋಪಿಸಿದ್ದಾರೆ.
'ಈ ಬಾರಿ ಸ್ಪರ್ಧೆ ತೀವ್ರವಾಗಿರುತ್ತದೆ ಮತ್ತು ಗೆಲುವಿನ ಅಂತರ ಕಡಿಮೆ ಇರುತ್ತದೆ ಎಂದು ಭಾವಿಸಿರುವ ರಾಜಕೀಯ ಪಕ್ಷಗಳು ಮತಗಳನ್ನು ಖರೀದಿಸಲು ಭಾರಿ ಹಣ ವ್ಯಯಿಸಲು ಸಜ್ಜಾಗಿದ್ದವು ಎಂದು ವೆಂಕಟೇಶನ್ ತಿಳಿಸಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳು ರಾಜ್ಯದಾದ್ಯಂತ ಹಣ ಹಂಚಿದ್ದರೆ, ಹೊಸದಾಗಿ ಕಣಕ್ಕಿಳಿದ ಟಿವಿಕೆ ಒಂದು ಅಥವಾ ಎರಡು ಕಡೆಗಳಲ್ಲಿ ಹಣ ನೀಡಿದೆ ಎಂಬುದು ಅವರ ವಾದ.
ಮತದಾನಕ್ಕಾಗಿ ಹಣ ಪಡೆಯುವುದು ಅಪರಾಧ ಮತ್ತು ಅದಕ್ಕಾಗಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವುದು ದೊಡ್ಡ ಕೆಲಸ. ಮತಕ್ಕಾಗಿ ಹಣ ಪಡೆಯುವುದಿಲ್ಲ ಎಂಬ ಸ್ಟಿಕ್ಕರ್ ಹಚ್ಚಿದ್ದ ಮನೆಗಳನ್ನೂ ರಾಜಕೀಯ ಪಕ್ಷಗಳು ಸಂಪರ್ಕಿಸಿವೆ ಎಂಬ ಮಾಹಿತಿ ನಮಗೆ ಸಿಕ್ಕಿದೆ ಎಂದಿದ್ದಾರೆ.
ಮತದಾರರಿಗೆ ಹಣ ನೀಡುತ್ತಿರುವ ಬಗ್ಗೆ ವಿಡಿಯೊ ಪುರಾವೆಗಳಿದ್ದರೂ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದ ಮತ್ತು ಚುನಾವಣೆ ರದ್ದುಗೊಳಿಸದ ಚುನಾವಣಾ ಆಯೋಗದ ನಡೆಯನ್ನು ಅವರು ಪ್ರಶ್ನಿಸಿದ್ದಾರೆ. ಕನಿಷ್ಠ 3ರಿಂದ 5 ಪ್ರತಿಶತದಷ್ಟು ಮತದಾರರು ಅತಿ ಹೆಚ್ಚು ಹಣ ನೀಡಿದವರಿಗೆ ನಿಷ್ಠೆ ತೋರಿಸಿದರೂ ಅದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದಿದ್ದಾರೆ.
ಚಿನ್ನದ ನಾಣ್ಯ, ಮೂಗುತಿ...
ವಿಶೇಷವಾಗಿ ಪಶ್ಚಿಮ ತಮಿಳುನಾಡಿನಲ್ಲಿ ಅಭ್ಯರ್ಥಿಗಳ ಪ್ರತಿನಿಧಿಗಳು ಅರ್ಧ ಗ್ರಾಂ ಚಿನ್ನದ ನಾಣ್ಯ, ಮೂಗುತಿ ಸೇರಿದಂತೆ, ಬೆಳ್ಳಿ ವಸ್ತುಗಳನ್ನು ಮತದಾರರ ಮನೆಬಾಗಿಲಿಗೆ ತಲುಪಿಸಿದ್ದಾರೆ. ಇದಲ್ಲದೆ, ಈ ವರ್ಷದ ಪೊಂಗಲ್ ಹಬ್ಬದ ಸಮಯದಲ್ಲಿ ಅಡುಗೆ ಪಾತ್ರೆಗಳು, ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಗಿತ್ತು.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಚುನಾವಣೆ ಘೋಷಣೆಯಾದಾಗಿನಿಂದ ತಮಿಳುನಾಡಿನಲ್ಲಿ ನಗದು ಸೇರಿದಂತೆ ₹599.24 ಕೋಟಿ ಮೌಲ್ಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಒಂದು ಮತಕ್ಕೆ ಕನಿಷ್ಠ ₹1,000 ದರವಿತ್ತು. ಕೆಲವು ಕಡೆಗಳಲ್ಲಿ ಪಕ್ಷಗಳು ಒಂದು ಮತಕ್ಕೆ ₹3,000ರಿಂದ ₹4,000ವರೆಗೂ ಆಮಿಷ ಒಡ್ಡಿದ್ದವು ಎಂದು ವೆಂಕಟೇಶನ್ ಆರೋಪಿಸಿದ್ದಾರೆ.
'ಈ ಬಾರಿ ಮತಕ್ಕಾಗಿ ಹಣ ಹಂಚಿಕೆ ಗುಟ್ಟಾಗಿ ನಡೆಯಲಿಲ್ಲ. ಬದಲಾಗಿ ಹಗಲು ಹೊತ್ತಿನಲ್ಲೇ ಬಹಿರಂಗವಾಗಿ ನಡೆದಿದೆ. ಪಕ್ಷಗಳು ಸರತಿಯ ಸಾಲಿನಲ್ಲಿ ಬಂದು ಹಣ ಹಂಚಿವೆ. ಎರಡೂ ಕಡೆಯಿಂದ (ಪಕ್ಷಗಳು ಮತ್ತು ಮತದಾರರು) ಜಾಗೃತಿ ಉಂಟಾಗದ ಹೊರತು ಈ ಪ್ರವೃತ್ತಿಯನ್ನು ತಡೆಯಲು ಸಾಧ್ಯವಿಲ್ಲ' ಎಂದು ಹಿರಿಯ ರಾಜಕಾರಣಿಯೊಬ್ಬರು ತಿಳಿಸಿದ್ದಾರೆ.
ರಾಜಕೀಯ ವಿಶ್ಲೇಷಕರು ಹೇಳಿದ್ದೇನು?
'ಚುನಾವಣೆಗಳು ಈಗ ಜಾತಿ ಮತ್ತು ಹಣದ ಆಟವಾಗಿ ಮಾರ್ಪಟ್ಟಿವೆ. ವ್ಯವಸ್ಥೆಯು ಭ್ರಷ್ಟವಾಗಿರುವುದರಿಂದ ಜನರು ಹಣ ಪಡೆಯುತ್ತಾರೆ' ಎಂದು ರಾಜಕೀಯ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ. ರಾಮು ಮಣಿವಣ್ಣನ್ ಹೇಳಿದ್ದಾರೆ.
'ಪ್ರಾಚೀನ ನಾಗರಿಕತೆಯ ಬಗ್ಗೆ ಹೆಮ್ಮೆ ಪಡುವ ತಮಿಳುನಾಡು, ಮತಕ್ಕಾಗಿ ಹಣ ಪಡೆಯುವ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿರುವುದು ವಿಪರ್ಯಾಸ. ಈ ಹಿಂದೆ ಇದು ₹500ರಷ್ಟಿತ್ತು. ಆದರೆ, ಈಗ ಆಘಾತಕಾರಿ ಮಟ್ಟಕ್ಕೆ ತಲುಪಿದೆ' ಎಂದು ರಾಜಕೀಯ ವಿಶ್ಲೇಷಕ ಟಿ.ಎನ್. ರಘು ಕಳವಳ ವ್ಯಕ್ತಪಡಿಸಿದ್ದಾರೆ.

