ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ವರ್ಷವಾಗುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್ಐಎ) ತಾಂತ್ರಿಕ ಮಾಹಿತಿ, ಶಂಕಿತರು, ಸ್ಥಳೀಯ ಸಂಬಂಧಿತ ವ್ಯಕ್ತಿಗಳ ವಿಚಾರಣೆ ಸೇರಿದಂತೆ ಹಂತ ಹಂತವಾಗಿ ತನಿಖೆ ನಡೆಸುತ್ತಿದೆ.
ಘಟನೆ ನಡೆದು ಕೆಲವೇ ದಿನಗಳ ನಂತರ ಪ್ರಕರಣದ ತನಿಖೆ ವಹಿಸಿಕೊಂಡ ಎನ್ಐಎ, 150ಕ್ಕೂ ಹೆಚ್ಚು ಜನರನ್ನು ಪ್ರಶ್ನಿಸಿದ್ದು. ಶಂಕಿತ ಭೂಗತ ಭಯೋತ್ಪಾದಕರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ.
ದಾಳಿಗೆ ಸ್ಥಳೀಯರ ಬೆಂಬಲದ ಜಾಲ ಪತ್ತೆಯಾದ ನಂತರ ತನಿಖೆ ಮತ್ತೊಂದು ತಿರುವು ಪಡೆದುಕೊಂಡಿದೆ. ದಾಳಿಕೋರರಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ನಂತರ, ಭಯೋತ್ಪಾದಕ ಹಣಕಾಸು ಸಂಪರ್ಕಗಳ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಯಿತು.
ಸಂವಹನ ಮಾದರಿಗಳು ಮತ್ತು ತಾಂತ್ರಿಕ ಗುಪ್ತಚರ ವಿಶ್ಲೇಷಣೆಯಿಂದ ಪ್ರಮುಖ ಪ್ರಗತಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಗಡಿಯುದ್ದಕ್ಕೂ ಸ್ಥಳೀಯ ಸಹಾಯಕರು ಮತ್ತು ನಿರ್ವಾಹಕರ ನಡುವಿನ ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.
ಬಂಧಿತ ಆರೋಪಿಗಳ ವಿಚಾರಣೆಯು ತನಿಖಾಧಿಕಾರಿಗಳಿಗೆ ದಾಳಿಕೋರರ ಚಲನವಲನ, ಆಶ್ರಯ ತಾಣಗಳು ಮತ್ತು ಲಾಜಿಸ್ಟಿಕ್ಸ್ ಸರಪಳಿಯನ್ನು ಪತ್ತೆ ಮಾಡಲು ಅನುವು ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.
2025ರ ಡಿಸೆಂಬರ್ ತಿಂಗಳಲ್ಲಿ, ವಿಶೇಷ ನ್ಯಾಯಾಲಯದ ಮುಂದೆ ಸುಮಾರು 1,600 ಪುಟಗಳ ಚಾರ್ಜ್ಶೀಟ್ ಅನ್ನು ಎನ್ಐಎ ಸಲ್ಲಿಸಿತ್ತು. ಅದರಲ್ಲಿ ಪಾಕಿಸ್ತಾನ ಮೂಲದ ಹ್ಯಾಂಡ್ಲರ್, ಪಾಕಿಸ್ತಾನಿ ಪ್ರಜೆಗಳು ಎಂದು ಗುರುತಿಸಲ್ಪಟ್ಟ ಮೂವರು ದಾಳಿಕೋರರು ಸೇರಿದಂತೆ ಏಳು ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಮೂವರು ದಾಳಿಕೋರರನ್ನು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿತ್ತು.
ಲಷ್ಕರ್ ಎ ತಯಬಾ (ಎಲ್ಇಟಿ) ಮತ್ತು ಅದರ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಸಹ ಸಂಸ್ಥೆ ಹೆಸರಿಸಿದ್ದು, ದಾಳಿಯನ್ನು ಪಾಕಿಸ್ತಾನ ಮೂಲದ ಗುಂಪುಗಳ ಪಾತ್ರವಿತ್ತು ಎಂದು ಹೇಳಿದೆ.
ಸ್ಥಳೀಯ ಆಪರೇಟರ್ಗಳು ಲಾಜಿಸ್ಟಿಕ್ ಬೆಂಬಲದೊಂದಿಗೆ ಪಾಕಿಸ್ತಾನದಲ್ಲಿ ಕುಳಿತೇ ಹ್ಯಾಂಡ್ಲರ್ಗಳು ಸಂಘಟಿತ ಕಾರ್ಯಾಚರಣೆ ನಡೆಸಿರುವುದನ್ನು ತನಿಖೆ ಸೂಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,
ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ. ದಾಳಿಗೆ ಸಂಬಂಧಿಸಿದ ಮತ್ತಷ್ಟು ಸಹಚರರನ್ನು ಗುರುತಿಸುವುದು, ಹಣಕಾಸಿನ ಹರಿವನ್ನು ಪತ್ತೆಹಚ್ಚುವುದು ಮತ್ತು ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸುವುದರ ಮೇಲೆ ತನಿಖೆ ನಡೆಯುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ವಿಚಾರಣಾ ಪ್ರಕ್ರಿಯೆಗಳು ಇನ್ನೂ ಮುಕ್ತಾಯಗೊಂಡಿಲ್ಲ,. ತನಿಖೆಯ ಅಂಶಳನ್ನು ಅಂತಿಮವಾಗಿ ನ್ಯಾಯಾಲಯದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

