ಮುಂಬೈ: ಅಜಿತ್ ಪವಾರ್ ಅವರ ನಿಧನದ ಬಳಿಕ ತೆರವಾದ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಪತ್ನಿ, ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕಾಂಗ್ರೆಸ್ ಪಕ್ಷವು ಸ್ಪರ್ಧೆಯಿಂದ ಹಿಂದೆ ಸರಿದು ನಾಮಪತ್ರವನ್ನು ಗುರುವಾರ ಸಂಜೆ ಹಿಂಪಡೆಯಲಿದೆ.
ಈ ಮೂಲಕ ಸುನೇತ್ರಾ ಪವಾರ್ ಅವರು ಅವಿರೋಧವಾಗಿ ಆಯ್ಕೆಯಾಗುವರು.
ಅಜಿತ್ ಪವಾರ್ ಅವರ ಗೌರವಾರ್ಥ ಬಾರಾಮತಿ ಕ್ಷೇತ್ರದಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿಯು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು. ಉದ್ಧವ್ ಠಾಕ್ರೆ ಅವರು ಶಿವಸೇನಾ ಕೂಡ ಸ್ಪರ್ಧೆ ಮಾಡದಿರಲು ತಿರ್ಮಾನಿಸಿತ್ತು.
ಕಾಂಗ್ರೆಸ್ ಪಕ್ಷವು ಸುನೇತ್ರಾ ಪವಾರ್ ವಿರುದ್ಧ ಸ್ಪರ್ಧಿಸಲು ಆಕಾಶ್ ಮೊರೆ ಅವರನ್ನು ಕಣಕ್ಕೆ ಇಳಿಸಿತ್ತು. ಎನ್ಸಿಪಿ (ಶರದ್) ನಾಯಕರೊಬ್ಬರು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರನ್ನು ಸಂಪರ್ಕಿಸಿ ಪಕ್ಷದ ನಿಲುವನ್ನು ಮರುಪರಿಶೀಲಿಸಲು ಮನವಿ ಮಾಡಿದ್ದರು. ಈ ಸಂಬಂಧ ಎನ್ಸಿಪಿ ಹಿರಿಯ ನಾಯಕ ಧನಂಜಯ್ ಮುಂಡೆ ಅವರು ಸಪ್ಕಾಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ.
ಹರ್ಷವರ್ಧನ್ ಸಪ್ಕಾಲ್ ಅವರು ಕಾಂಗ್ರೆಸ್ ಅಭ್ಯರ್ಥಿಗೆ ನಾಮಪತ್ರ ವಾಪಸು ಪಡೆಯುವಂತೆ ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ.
ಬಾರಾಮತಿ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದ ಮತ್ತು ಆರು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರು ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು 1991,1995, 1999, 2004, 2009, 2014, 2019 ಮತ್ತು 2024ರಲ್ಲಿ ಬಾರಾಮತಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಕ್ಷೇತ್ರದೊಂದಿಗೆ ಬಲವಾದ ನಂಟು ಹೊಂದಿದ್ದರು.

