ನವದೆಹಲಿ: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಲ್ಪ ವಿರಾಮ ಬಿದ್ದಿದೆ. ಅಮೆರಿಕ ಮತ್ತು ಇರಾನ್ ಪರಸ್ಪರ ಪ್ರಸ್ತಾವನೆಗಳ ಮೂಲಕ 2 ವಾರಗಳ ಯುದ್ಧ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ನಿರ್ಧಾರವನ್ನು ಭಾರತ ಸ್ವಾಗತಿಸಿದೆ.
ಕದನ ವಿರಾಮ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ.
ಇದು ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಕಾರಣವಾಗಲಿದೆ ಎಂದು ನಂಬುತ್ತೇವೆ. ನಾವು ಈ ಹಿಂದೆ ಪ್ರತಿಪಾದಿಸಿದಂತೆ, ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ಉದ್ವಿಗ್ನತೆ ಶಮನ, ನಿರಂತರ ಸಂವಾದ ಮತ್ತು ರಾಜತಾಂತ್ರಿಕತೆ ಅತ್ಯಗತ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿದೆ.
ಈ ಸಂಘರ್ಷವು ಈಗಾಗಲೇ ಜನರಿಗೆ ಅಪಾರ ಸಂಕಷ್ಟವನ್ನುಂಟುಮಾಡಿದೆ. ಜಾಗತಿಕ ಇಂಧನ ಪೂರೈಕೆ ಹಾಗೂ ವ್ಯಾಪಾರ ಜಾಲಗಳನ್ನು ಅಸ್ತವ್ಯಸ್ತಗೊಳಿಸಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಅಡೆತಡೆಯಿಲ್ಲದ ನೌಕಾ ಸಂಚಾರ ಮತ್ತು ಜಾಗತಿಕ ವಾಣಿಜ್ಯ ಹರಿವು ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದೂ ಸಚಿವಾಲಯ ಹೇಳಿದೆ.
ಹೊರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಮುಕ್ತಗೊಳಿಸುವುದೂ ಸೇರಿದಂತೆ ಕೆಲ ಷರತ್ತು ಒಳಗೊಂಡ ಕದನ ವಿರಾಮಕ್ಕೆ ಇರಾನ್ ಮತ್ತು ಅಮೆರಿಕ ಒಪ್ಪಿಕೊಂಡಿವೆ.

