ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶ ಮಾಡುವ ಅಕ್ರಮ ವಲಸಿಗರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಸೇನೆ ವಿನೂತನ ಕ್ರಮಕ್ಕೆ ಮುಂದಾಗಿದೆ.
ತಂತಿಬೇಲಿ ಅಳವಡಿಸಲಾಗದ ಇಂಡೋ-ಬಾಂಗ್ಲಾ ಗಡಿಯಲ್ಲಿ ವಿಷಕಾರಿ ಸರ್ಪಗಳು ಮತ್ತು ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿವೆ.
ಹೌದು.. ಭಾರತ-ಬಾಂಗ್ಲಾ ಗಡಿಯಲ್ಲಿ ಒಳನುಸುಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಡೆ ಬೇಲಿಗಳೇ ಇಲ್ಲದ ಕಾರಣ ಇಂತಹ ಗಡಿ ಪ್ರದೇಶಗಳ ಮೂಲಕ ಅಕ್ರಮ ವಲಸಿಗರು ಗಡಿ ದಾಟಿ ಭಾರತದೊಳಗೆ ನುಸುಳುತ್ತಿದ್ದಾರೆ. ಇಂತಹ ನುಸುಳುಕೋರರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಭಾರತೀಯ ಸೇನೆ ವಿನೂತನ ಕ್ರಮಕ್ಕೆ ಮುಂದಾಗಿದೆ.
ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ ಗಡಿಯಲ್ಲಿ ಹಾವುಗಳು ಮತ್ತು ಮೊಸಳಗೆಗಳನ್ನು ನಿಯೋಜಿಸಲು ಬಿಎಸ್ಎಫ್ ಮುಂದಾಗಿದೆ. ಗಡಿಯಲ್ಲಿ ಸುಮಾರು 175 ಕಿ.ಮೀ ಬೇಲಿ ಇಲ್ಲದ ಪ್ರದೇಶದುದ್ದಕ್ಕೂ ಸರೀಸೃಪಗಳನ್ನು ನಿಯೋಜಿಸಲು ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಭಾರತ ಮತ್ತು ಬಾಂಗ್ಲಾದೇಶದ ಸುಮಾರು 4,096 ಕಿ.ಮೀ. ಗಡಿ ಪ್ರದೇಶಗಳ ಪೈಕಿ 850 ಕಿ.ಮೀ. ಗಡಿಯಲ್ಲಿ ಬೇಲಿಯೇ ಇಲ್ಲ. ಈ 850 ಕಿ.ಮೀ ಗಡಿಯಲ್ಲಿ ಕೆಲವು ಪ್ರದೇಶಗಳಲ್ಲಿ ಬೇಲಿ ನಿರ್ಮಾಣವೇ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ.

