HEALTH TIPS

ಮೂರು ಬಾರಿಯ CM ಮಮತಾ ಬ್ಯಾನರ್ಜಿ ಬಳಿ ಇರುವುದು ಕೇವಲ 75,700 ರೂ. ನಗದು!

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಬಾನಿಪುರ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ನಾಮಪತ್ರ ಸಲ್ಲಿಸಿ, ತಮ್ಮ ಆಸ್ತಿ-ಪಾಸ್ತಿ ವಿವರಗಳನ್ನು ಚುನಾವಣಾ ಅಫಿಡವಿಟ್‌ ನಲ್ಲಿ ಬಹಿರಂಗಪಡಿಸಿದ್ದಾರೆ.

71 ವರ್ಷದ ಮಮತಾ ಬ್ಯಾನರ್ಜಿ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿದ್ದು, ದೀರ್ಘ ರಾಜಕೀಯ ಜೀವನವಿದ್ದರೂ ಮನೆ, ಕಾರು ಅಥವಾ ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲವೆಂದು ಘೋಷಿಸಿದ್ದಾರೆ.

ದೇಶದ 'ಬಡ' ಮುಖ್ಯಮಂತ್ರಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಅವರು, ಒಟ್ಟು ಆಸ್ತಿ ಮೌಲ್ಯವನ್ನು 15.4 ಲಕ್ಷ ರೂ. ಎಂದು ದಾಖಲಿಸಿದ್ದಾರೆ.

ಅವರ ಆದಾಯದ ವಿವರಗಳ ಪ್ರಕಾರ, 2023-24ರಲ್ಲಿ 20,72,740 ರೂ. ಆದಾಯ ಗಳಿಸಿದ್ದು, 2024-25ರಲ್ಲಿ ಅದು 23,21,570 ರೂ.ಕ್ಕೆ ಏರಿಕೆಯಾಗಿದೆ. 2021-22ರಲ್ಲಿ ಅವರ ಆದಾಯ 38,14,410 ರೂ. ಆಗಿತ್ತು. 2025-26 ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ 40,600 ರೂ. ಟಿಡಿಎಸ್ ಮರುಪಾವತಿಯನ್ನು ಸಹ ಉಲ್ಲೇಖಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಬಳಿ 75,700 ರೂ. ನಗದು ಇದೆ. ಇಂಡಿಯನ್ ಬ್ಯಾಂಕ್‌ ನಲ್ಲಿರುವ ಎರಡು ಖಾತೆಗಳಲ್ಲಿ ಒಟ್ಟು 12,76,209 ರೂ. ಠೇವಣಿ ಇದೆ. ಇದರಲ್ಲಿ 12,36,209 ರೂ. ಉಳಿತಾಯ ಖಾತೆಯಲ್ಲಿ ಇದ್ದು, ಚುನಾವಣಾ ವೆಚ್ಚಕ್ಕಾಗಿ ಪ್ರತ್ಯೇಕ ಖಾತೆಯಲ್ಲಿ 40,000 ರೂ. ಇದೆ.

ಅವರು 9 ಗ್ರಾಂ 750 ಮಿಲಿಗ್ರಾಂ ಚಿನ್ನವನ್ನು ಹೊಂದಿದ್ದು, ಇದರ ಮೌಲ್ಯ ಸುಮಾರು 1,45,000 ರೂ. ಎಂದು ಅಂದಾಜಿಸಲಾಗಿದೆ. ಈ ಮೂಲಕ ಅವರ ಒಟ್ಟು ಚರ ಆಸ್ತಿ ಮೌಲ್ಯ 15,37,509.71 ರೂ. ಆಗಿದೆ.

ಮೂರು ಅವಧಿಗೆ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ತಮ್ಮ ಬಳಿ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಸತಿ ಆಸ್ತಿ ಅಥವಾ ಖಾಸಗಿ ವಾಹನ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

'ಬಡ' ಮುಖ್ಯಮಂತ್ರಿ

2021ರ ಚುನಾವಣೆಯ ವೇಳೆಯಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ಪ್ರಕಾರ, ದೇಶದ 31 ಮುಖ್ಯಮಂತ್ರಿಗಳಲ್ಲಿ ಮಮತಾ ಬ್ಯಾನರ್ಜಿ ಸುಮಾರು 15 ಲಕ್ಷ ರೂ. ನಿವ್ವಳ ಮೌಲ್ಯ ಹೊಂದಿದ್ದರು. ಇದೇ ವೇಳೆ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸುಮಾರು 930 ಕೋಟಿ ರೂ. ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎಂದು ಗುರುತಿಸಲ್ಪಟ್ಟಿದ್ದರು. 2016ರಲ್ಲಿ ಮಮತಾ ಬ್ಯಾನರ್ಜಿ ಅವರ ಆಸ್ತಿ ಸುಮಾರು 30 ಲಕ್ಷ ರೂ.ವಾಗಿತ್ತು.

ರಾಜಕೀಯ ಪಯಣ

ಮಮತಾ ಬ್ಯಾನರ್ಜಿ 1970ರ ದಶಕದಲ್ಲಿ ಕಾಂಗ್ರೆಸ್ (ಐ) ಮೂಲಕ ರಾಜಕೀಯ ಪ್ರವೇಶಿಸಿದರು. ಬಳಿಕ 1998ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದರು. 1984ರಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಸೋಮನಾಥ್ ಚಟರ್ಜಿ ಅವರನ್ನು ಸೋಲಿಸಿ ಅತಿ ಕಿರಿಯ ಸಂಸದರಲ್ಲಿ ಒಬ್ಬರಾದರು.

1991ರಲ್ಲಿ ಕಲ್ಕತ್ತಾ ದಕ್ಷಿಣ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದು, 1996, 1998, 1999, 2004 ಮತ್ತು 2009ರ ಚುನಾವಣೆಯಲ್ಲಿಯೂ ಅದೇ ಕ್ಷೇತ್ರವನ್ನು ಉಳಿಸಿಕೊಂಡರು. ಅದೇ ವರ್ಷ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಯುವಜನ ವ್ಯವಹಾರಗಳು, ಕ್ರೀಡೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಆಗಿ ಸೇವೆ ಸಲ್ಲಿಸಿದರು.

1999ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸೇರಿ ರೈಲ್ವೆ ಸಚಿವೆ ಆಗಿ ಕೆಲಸ ನಿರ್ವಹಿಸಿದರು. 2003ರಲ್ಲಿ ಮತ್ತೆ ಎನ್‌ಡಿಎ ಸರ್ಕಾರಕ್ಕೆ ಕ್ಯಾಬಿನೆಟ್ ಸಚಿವೆಯಾಗಿ ಮರಳಿದರು.

2011ರಲ್ಲಿ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಗೆಲುವು ಸಾಧಿಸಿದ ನಂತರ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಅಂದಿನಿಂದ ನಿರಂತರವಾಗಿ ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಚುನಾವಣೆ ಹಿನ್ನೆಲೆ

ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯನ್ನು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿಯಾಗಿ ಪರಿಗಣಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries