ನವದೆಹಲಿ: ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲ್ಯುಎಸ್) ಕೋಟಾ ಅಡಿ ಮೀಸಲಾತಿ ಕೇಳುವ ಅಭ್ಯರ್ಥಿಯು ಕಟ್ಆಫ್ ದಿನ ಅಥವಾ ಅದಕ್ಕೂ ಮುಂಚಿನ ದಿನಾಂಕದೊಳಗಾಗಿ ನಿರ್ದಿಷ್ಟ ಹಣಕಾಸು ವರ್ಷಕ್ಕೆ ಸಂಬಂಧಿಸಿ ನಿಗದಿತ ನಮೂನೆಯಲ್ಲಿ ಆದಾಯ ಮತ್ತು ಸ್ವತ್ತುಗಳ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿರ್ದಿಷ್ಟ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಲು ಹೇಳಿದಾಗ, ಬೇರೊಂದು ವಿತ್ತೀಯ ವರ್ಷದ ಪ್ರಮಾಣಪತ್ರ ಸಲ್ಲಿಸಿದಲ್ಲಿ ಅದು ಮೀಸಲಾತಿ ಕೇಳುವ ಅಭ್ಯರ್ಥಿಯ ಅರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಲಿದೆ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಹಾಗೂ ಪಿ.ಬಿ.ವರಾಳೆ ಅವರು ಇದ್ದ ಪೀಠವು ಈ ಕುರಿತ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿದೆ.
ಅಲಹಾಬಾದ್ ಹೈಕೋರ್ಟ್ನ ವಿಭಾಗೀಯ ಪೀಠವು 2023ರ ಜನವರಿ 9ರಂದು ನೀಡಿದ್ದ ಆದೇಶ ಪ್ರಶ್ನಿಸಿ ಪೂನಂ ದ್ವಿವೇದಿ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಪೀಠವು ವಜಾಗೊಳಿಸಿದೆ.
ಅರ್ಜಿದಾರರನ್ನು ಆರೋಗ್ಯ ಕಾರ್ಯಕರ್ತೆಯರ ಹುದ್ದೆಗೆ ಪರಿಗಣಿಸುವಂತೆ ಹೈಕೋರ್ಟ್ನ ಏಕಸದಸ್ಯ ಪೀಠವೊಂದು ಉತ್ತರ ಪ್ರದೇಶದ ಅಧೀನ ಸೇವೆಗಳ ನೇಮಕಾತಿ ಆಯೋಗಕ್ಕೆ ನೀಡಿದ್ದ ಆದೇಶವನ್ನು ಕೂಡ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಈ ಪ್ರಕರಣದಲ್ಲಿ, ಮೇಲ್ಮನವಿದಾರರು ನಿಗದಿತ ನಮೂನೆಯಲ್ಲಿರುವ ಅಗತ್ಯ ಪ್ರಮಾಣಪತ್ರಗಳನ್ನು ಕಟ್ ಆಫ್ ದಿನದಂದು ಹೊಂದಿರಲಿಲ್ಲ. ಹೀಗಾಗಿ ಅವರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯ ಇಲ್ಲ ಎಂದು ಏಪ್ರಿಲ್ 10ರಂದು ನೀಡಿರುವ ತೀರ್ಪಿನಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.

