ಹೈದರಾಬಾದ್: ತೆಲಂಗಾಣ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ, ಮಾಜಿ ಎಂಎಲ್ಸಿ ಕೆ. ಕವಿತಾ ಅವರು ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ.
ಕೆ. ಕವಿತಾ ಅವರು 'ತೆಲಂಗಾಣ ರಾಷ್ಟ್ರ ಸೇನಾ' (TRS) ಎಂಬ ಹೆಸರಿನ ಈ ಪಕ್ಷವನ್ನು ಶನಿವಾರ ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿರುವ ಕವಿತಾ, ಭಾರತ ರಾಷ್ಟ್ರ ಸಮಿತಿ (BRS)ಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಪಕ್ಷದ ನಾಯಕತ್ವದೊಂದಿಗೆ ಉಂಟಾದ ಭಿನ್ನಾಭಿಪ್ರಾಯಗಳ ಹಿನ್ನೆಲೆ, 2025ರ ಜೂನ್ನಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಬಳಿಕ ಅವರು ತಮ್ಮ ಎಂಎಲ್ಸಿ ಸ್ಥಾನಕ್ಕೂ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು.
ಪಕ್ಷದಿಂದ ದೂರವಾದ ನಂತರ, ಕವಿತಾ ತಮ್ಮ ಸ್ಥಾಪಿತ ಸಂಘಟನೆ 'ತೆಲಂಗಾಣ ಜಾಗೃತಿ' ಮೂಲಕ ಸ್ವತಂತ್ರ ರಾಜಕೀಯ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಇದರ ಭಾಗವಾಗಿ 'ಜಾಗೃತಿ ಜನಮ್ ಬಾಟ' ಯಾತ್ರೆ ನಡೆಸಿ, ರಾಜ್ಯದ ವಿವಿಧ ಭಾಗಗಳಲ್ಲಿ ಜನರನ್ನು ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದರು.
ಮೂಲಗಳ ಪ್ರಕಾರ, ಕೆ. ಕವಿತಾ ಅವರು ಆರಂಭದಲ್ಲಿ ತಮ್ಮ ಹೊಸ ಪಕ್ಷಕ್ಕೆ 'ತೆಲಂಗಾಣ ಪ್ರಜಾ ಜಾಗೃತಿ' ಎಂಬ ಹೆಸರು ಪರಿಗಣಿಸಿದ್ದರೂ, ನಂತರ 'ತೆಲಂಗಾಣ ರಾಷ್ಟ್ರ ಸೇನಾ' ಎಂದು ಅಂತಿಮಗೊಳಿಸಿದರು ಎಂದು ತಿಳಿದುಬಂದಿದೆ.

