ವಿವಾದವು ಲೋಧಿ ಎಸ್ಟೇಟ್,95ರ ಟೈಪ್- VII ಬಂಗಲೆಯ ಸುತ್ತ ಕೇಂದ್ರೀಕೃತವಾಗಿದೆ. ಇದು ಉನ್ನತ ಮಟ್ಟದ ಸರಕಾರಿ ವಸತಿ ಗೃಹಗಳಲ್ಲೊಂದಾಗಿದ್ದು,ಕೇಜ್ರಿವಾಲ್ ಇತ್ತೀಚಿಗೆ ಇಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಕೇಜ್ರಿವಾಲ್ ಆಪ್ನ ರಾಷ್ಟ್ರೀಯ ಸಂಚಾಲಕರಾಗಿರುವುದರಿಂದ ಕೇಂದ್ರವು ನಿಯಮಾನುಸಾರ ಅವರಿಗೆ ಈ ಬಂಗಲೆಯನ್ನು ಹಂಚಿಕೆ ಮಾಡಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಲ್ಲಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಪರ್ವೇಶ ವರ್ಮಾ ಅವರು,ಕೇಜ್ರಿವಾಲ್ ನಿವಾಸವನ್ನು ನಿಯಮಗಳನ್ನು ಮೀರಿ ಉನ್ನತ ಮಟ್ಟದ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಆರೋಪಿಸಿದರು. ಅದನ್ನು 'ಶೀಷಮಹಲ್ 2' ಎಂದು ಬಣ್ಣಿಸುವ ಮೂಲಕ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದಾಗ ಅವರ ನಿವಾಸದ ನವೀಕರಣಕ್ಕಾಗಿ ಮಾಡಿದ್ದ ವೆಚ್ಚದ ಕುರಿತು ಬಿಜೆಪಿ ಹಿಂದೆ ಮಾಡಿದ್ದ ಟೀಕೆಯನ್ನು ನೆನಪಿಸಿದರು.
ಕೆಲವು ದೃಶ್ಯಾವಳಿಗಳನ್ನು ತೋರಿಸಿ ಇವು ಬಂಗಲೆಯ ಒಳಗಿನ ನೋಟಗಳು ಎಂದು ಹೇಳಿದ ವರ್ಮಾ, ಖಾಸಗಿ ಹಣವನ್ನು ಬಳಸಿಕೊಂಡು ಬಂಗಲೆಯಲ್ಲಿ ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದರು. ಇಷ್ಟೊಂದು ದೊಡ್ಡ ಮಟ್ಟದ ಬದಲಾವಣೆಗಳು ಪಾರದರ್ಶಕತೆ ಮತ್ತು ಔಚಿತ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತವೆ ಎಂದು ಆರೋಪಿಸಿದರು.
ದಿಲ್ಲಿಯ ಮತದಾರರು ಈಗಾಗಲೇ ಈ 'ರೆಹಮಾನ್ ಡಕಾಯಿತ್'ನನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಅವರು ಪಂಜಾಬ್ನತ್ತ ಗಮನವನ್ನು ಹರಿಸುವುದು ಅನಿವಾರ್ಯವಾಗಿದೆ ಎಂದ ವರ್ಮಾ, ಕಾನೂನು ಪರಿಶೀಲನೆ ಎದುರಿಸುತ್ತಿರುವವರು ಸೇರಿದಂತೆ ಹಲವಾರು ಆಪ್ ನಾಯಕರು ದಿಲ್ಲಿ ಮತ್ತು ಪಂಜಾಬ್ಗಳಲ್ಲಿ ಸರಕಾರಿ ವಸತಿಗೃಹಗಳಲ್ಲಿ ವಾಸ್ತವ್ಯ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಆಪ್ ನಾಯಕತ್ವವು ತನ್ನ ಮೂಲ 'ಆಮ್ ಆದ್ಮಿ' ಧೋರಣೆಯಿಂದ ದೂರ ಸರಿದಿದೆ ಮತ್ತು ತನ್ನ ರಾಜಕೀಯ ಸಂದೇಶಕ್ಕೆ ವಿರುದ್ಧವಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿದೆ ಎಂದೂ ಅವರು ಆರೋಪಿಸಿದರು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಆಪ್ ಆರೋಪಗಳನ್ನು ನಿರಾಧಾರವೆಂದು ತಳ್ಳಿಹಾಕಿದೆ. ಬಿಜೆಪಿ ತೋರಿಸಿದ ದೃಶ್ಯಾವಳಿಗಳನ್ನು ಸಂಪೂರ್ಣ ನಕಲಿ ಎಂದು ಬಣ್ಣಿಸಿದ ಪಕ್ಷದ ರಾಜ್ಯಸಭಾ ಸಂಸದ ಸಂಜಯ ಸಿಂಗ್ ಅವರು,ಅದು ತಪ್ಪು ಮಾಹಿತಿಗಳನ್ನು ಹರಡುತ್ತಿದೆ ಎಂದು ಆರೋಪಿಸಿದರು. ವರ್ಮಾ ಮತ್ತು ಈ ಚಿತ್ರಗಳನ್ನು ಪ್ರಸಾರ ಮಾಡುವ ಮಾಧ್ಯಮಗಳ ವಿರುದ್ಧ ಆಪ್ ಮಾನನಷ್ಟ ದಾವೆಗಳನ್ನು ಹೂಡಲಿದೆ ಎಂದ ಅವರು,ಹೋಲಿಕೆಗಾಗಿ ತಮ್ಮ ಅಧಿಕೃತ ನಿವಾಸಗಳನ್ನು ಸಾರ್ವಜನಿಕವಾಗಿ ತೋರಿಸುವಂತೆ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸೇರಿದಂತೆ ಬಿಜೆಪಿ ನಾಯಕರು ಮತ್ತು ಉಪರಾಜ್ಯಪಾಲರಿಗೆ ಸವಾಲು ಹಾಕಿದರು.
ಪಾರದರ್ಶಕ ಹೋಲಿಕೆ ನಡೆಯಲಿ. ಯಾರ ನಿವಾಸ ನಿಜಕ್ಕೂ ಐಷಾರಾಮಿ ಎನ್ನುವ ಸತ್ಯ ಹೊರಬರುತ್ತದೆ ಎಂದರು.

