ಇಂಫಾಲ: ಇಬ್ಬರು ಮಕ್ಕಳ ಸಾವಿಗೆ ಕಾರಣವಾದ ಇತ್ತೀಚಿನ ದಾಳಿಯ ವಿರುದ್ಧ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾವೇಶಗಳನ್ನು ನಿಷೇಧಿಸಿದ ಆದೇಶವನ್ನು ಉಲ್ಲಂಘಿಸಿ, ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ನಡೆದವು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಎ. 7ರಂದು ವಿಷ್ಣುಪುರದ ಟ್ರೋಂಗ್ಲಾಬಿ ಪ್ರದೇಶದಲ್ಲಿ ಪ್ರಕ್ಷೇಪಕ (ಪ್ರಾಜೆಕ್ಟೈಲ್ ಅಥವಾ ಕ್ಷಿಪಣಿಯಂತಹ ಸಾಧನ) ಮನೆಯೊಂದಕ್ಕೆ ಅಪ್ಪಳಿಸಿದ ಪರಿಣಾಮ, ನಿದ್ರೆಯಲ್ಲಿದ್ದ ಐದು ವರ್ಷದ ಬಾಲಕ ಹಾಗೂ ಐದು ತಿಂಗಳ ಹೆಣ್ಣುಮಗು ಮೃತಪಟ್ಟಿದ್ದರು.
ಶಂಕಿತ ಕುಕಿ ಉಗ್ರರು ಸಮೀಪದ ಬೆಟ್ಟದಿಂದ ಪ್ರಕ್ಷೇಪಕವನ್ನು ಉಡಾಯಿಸಿದ್ದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಘಟನೆ ನಡೆದ ಗ್ರಾಮವು ಚುರಾಚಂದಪುರದ ಬೆಟ್ಟ ಪ್ರದೇಶಗಳ ಸಮೀಪದಲ್ಲಿದ್ದು, ಮೇ 2023ರಲ್ಲಿ ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ-ರೆ-ಹಮರ್ ಸಮುದಾಯಗಳ ನಡುವೆ ಜನಾಂಗೀಯ ಘರ್ಷಣೆಗಳು ಆರಂಭವಾದಾಗಿನಿಂದ ಉದ್ವಿಗ್ನತೆಗೆ ಸಾಕ್ಷಿಯಾಗಿದೆ.
ಎ. 7ರಂದು ನಡೆದ ದಾಳಿಯಲ್ಲಿ ತನ್ನ ಸಮುದಾಯದ ಜನರು ಭಾಗಿಯಾಗಿದ್ದರು ಎನ್ನುವುದನ್ನು ಕುಕಿ ಸಂಘಟನೆ 'ದಿ ಇಂಡಿಜಿನಿಯಸ್ ಟ್ರೈಬಲ್ ಲೀಡರ್ಸ್ ಫೋರಮ್' ತಿರಸ್ಕರಿಸಿದೆ. ಮೈತೆಯಿ ಸಮುದಾಯದ ಮೇಲೆ ಪರಿಣಾಮ ಬೀರುವ ಯಾವುದೇ ಅಹಿತಕರ ಘಟನೆಗೆ ಸೂಕ್ತ ತನಿಖೆ ನಡೆಸದೆ ಕುಕಿ-ರೆಗಳನ್ನು ಹೊಣೆಯಾಗಿಸಬಾರದು ಎಂದು ಅದು ಹೇಳಿದೆ.

