ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಗತಿ ಬಗ್ಗೆ ಸುಪ್ರೀಂ ಕೋರ್ಟ್ ಆಶಾವಾದ ವ್ಯಕ್ತಪಡಿಸಿದ್ದು, ಮಾರ್ಚ್ 31ರವರೆಗೆ 60 ಲಕ್ಷ ಆಕ್ಷೇಪಣೆಗಳ ಪೈಕಿ 47.4 ಲಕ್ಷ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದೆ.
ಅಲ್ಲದೆ ಅದನ್ನು ಪೂರ್ಣಗೊಳಿಸಲು ಏಪ್ರಿಲ್ 7ರ ಗಡುವು ವಿಧಿಸಿದೆ.
ಎಸ್ಐಆರ್ ಪ್ರಗತಿ ಬಗ್ಗೆ ಕಲ್ಕತ್ತ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಂದ ಬಂದ ಎರಡು ಮಾಹಿತಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರಿದ್ದ ಪೀಠ ಈ ಅಭಿಪ್ರಾಯಪಟ್ಟಿದೆ.
ನಿತ್ಯ 1.75 ಲಕ್ಷದಿಂದ 2 ಲಕ್ಷದವರೆಗೆ ಆಕ್ಷೇಪಣೆಗಳ ವಿಲೇವಾರಿಯಾಗುತ್ತಿದ್ದು, ಈ ಅಂಕಿಅಂಶ ಕಂಡು ನಮಗೆ ಬಹಳ ಸಂತೋಷ ಮತ್ತು ಆಶಾವಾದ ಮೂಡಿದೆ ಎಂದು ಸಿಜೆಐ ಹೇಳಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ಹೊರಗಿಡುವಿಕೆಯ ವಿರುದ್ಧದ ಮೇಲ್ಮನವಿಗಳನ್ನು ಆಲಿಸಲು ಚುನಾವಣಾ ಆಯೋಗವು ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರ ನೇತೃತ್ವದಲ್ಲಿ 19 ಮೇಲ್ಮನವಿ ನ್ಯಾಯಮಂಡಳಿಗಳನ್ನು ರಚಿಸಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ನ 700 ನ್ಯಾಯಾಂಗದ ಅಧಿಕಾರಿಗಳು ಸಂಗ್ರಹಿಸಿದ ಕಾರಣಗಳ ಪಟ್ಟಿ ಸೇರಿದಂತೆ ಚುನಾವಣಾ ಆಯೋಗದ ಸಂಪೂರ್ಣ ದಾಖಲೆಯನ್ನು ನ್ಯಾಯಮಂಡಳಿಗಳಿಗೆ ಒದಗಿಸಬೇಕು ಎಂದು ನಿರ್ದೇಶಿಸಿದ್ದಾರೆ.
ಸ್ವಾಭಾವಿಕ ನ್ಯಾಯದ ತತ್ವದಡಿ ನ್ಯಾಯಮಂಡಳಿಗಳು ನಿಯಮದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಸತ್ಯಾಸತ್ಯತೆ ಪರಿಶೀಲಿಸದೆ ಯಾವುದೇ ಹೊಸ ದಾಖಲೆ ಪಡೆಯುವುದರ ವಿರುದ್ಧ ಎಚ್ಚರಿಕೆ ನೀಡಿದೆ.
ಇದೇವೇಳೆ, ನ್ಯಾಯಾಂಗದ ಅಧಿಕಾರಿಗಳಿಗೆ ಸಮಯಕ್ಕೆ ತಕ್ಕಂತೆ ಗೌರವ ಧನ ಮತ್ತು ಇತರೆ ವೆಚ್ಚಗಳನ್ನು ಭರಿಸುವಂತೆ ಚುನಾವಣಾ ಆಯೋಗ ಮತ್ತು ಚುನಾವಣಾ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಏಪ್ರಿಲ್ 23 ಮತ್ತು 28ರಂದು ಎರಡು ಹಂತಗಳಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಯಲಿದೆ.

