ಶುದ್ಧ ಇಂಧನ ಪರಿಹಾರವೆಂದು ಹೇಳಲಾಗುವ ಪೆಟ್ರೋಲ್ ನೊಂದಿಗೆ ಎಥೆನಾಲ್ ಅನ್ನು ಬೆರೆಸುವ ಭಾರತದ ಒತ್ತಾಯವು ದೇಶದಲ್ಲಿ ನೀರಿನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಬಹುದು. ಭಾರತದಲ್ಲಿ ಬೆಳೆಯುವ ಮೆಕ್ಕೆಜೋಳ, ಕಬ್ಬು ಮತ್ತು ದೇಶದ ನೆಚ್ಚಿನ ಧಾನ್ಯವಾದ ಭತ್ತಕ್ಕೆ ಇತರ ಬೆಳೆಗಳಿಗಿಂತ ಹೆಚ್ಚಿನ ನೀರು ಅಗತ್ಯ.
ಹೀಗಿರುವಾಗ, ಎಥೆನಾಲ್ನ ಕಚ್ಚಾ ವಸ್ತುಗಳಾದ ಕಬ್ಬು ಮತ್ತು ಮೆಕ್ಕೆಜೋಳವನ್ನು ಬೆಳೆಯಲು ಹಾಗೂ ಸಂಸ್ಕರಿಸಲು ಹೆಚ್ಚಿನ ನೀರಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರ ಸಮಿತಿ (ಐಪಿಸಿಸಿ) ವರದಿಯ ಲೇಖಕ ಅಂಜಲ್ ಪ್ರಕಾಶ್ ಹೇಳಿದ್ದಾರೆ.
ಎಥೆನಾಲ್ ಮಿಶ್ರಣ ಎಂದರೇನು?
ಎಥೆನಾಲ್ ಮಿಶ್ರಣ ಎಂದರೆ ಆಮದು ಮಾಡಿಕೊಂಡ ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಪೆಟ್ರೋಲ್ ಗೆ ಎಥೆನಾಲ್ ಎಂದು ಕರೆಯಲ್ಪಡುವ ಸಸ್ಯ ಆಧಾರಿತ ಆಲ್ಕೋಹಾಲ್ ಅನ್ನು ಬೆರೆಸುವುದು. ದೇಶವು ಈ ಕಾರ್ಯಕ್ರಮವನ್ನು ಆಕ್ರಮಣಕಾರಿಯಾಗಿ ಹೆಚ್ಚಿಸುತ್ತಿದೆ. ಇದಕ್ಕೆ ಅಕ್ಕಿ ಪ್ರಮುಖ ಕಚ್ಚಾ ವಸ್ತುವಾಗಿದೆ. ಸರ್ಕಾರವು 2024-25ರಲ್ಲಿ ಎಥೆನಾಲ್ ಉತ್ಪಾದನೆಗೆ 52 ಲಕ್ಷ ಟನ್ ಅಕ್ಕಿಯನ್ನು ಹಂಚಿಕೆ ಮಾಡಿತು. ಈಗ 2025-26ರಲ್ಲಿ 90 ಲಕ್ಷ ಟನ್ ಗುರಿಯನ್ನು ಹೊಂದಿದೆ. ಈ ಧಾನ್ಯಕ್ಕಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಬಡವರಿಗೆ ವಿತರಿಸಲಾದ ನುಚ್ಚು ಅಕ್ಕಿಯ ಪಾಲನ್ನು 25%ರಿಂದ 10%ಕ್ಕೆ ಇಳಿಸಲು ಯೋಜಿಸಿದೆ. ಇದರಲ್ಲಿ ಉಳಿಸಿದ ಅಕ್ಕಿಯನ್ನು ನೇರವಾಗಿ ಎಥೆನಾಲ್ ಮಿಶ್ರಣವನ್ನು ಸುಗಮಗೊಳಿಸಲು ಬಳಸಲಾಗುವ ಡಿಸ್ಟಿಲರಿಗಳಿಗೆ ನೀಡಲಾಗುತ್ತದೆ.
ಎಥೆನಾಲ್ ಮಿಶ್ರಣವು ನೀರಿನ ಅಭಾವವನ್ನು ಉಂಟು ಮಾಡುವುದು ಹೇಗೆ?
ಎಥೆನಾಲ್ ಮಿಶ್ರಣದ ಸಮಸ್ಯೆಯನ್ನು ದತ್ತಾಂಶವು ಸಮರ್ಪಕವಾಗಿ ವಿವರಿಸುತ್ತದೆ. ಅದು ಹೇಗೆಂದರೆ, ಅಕ್ಕಿಯಿಂದ ಒಂದು ಲೀಟರ್ ಎಥೆನಾಲ್ ಉತ್ಪಾದಿಸಲು ಸುಮಾರು 10,790 ಲೀಟರ್ ನೀರು ಬೇಕಾಗುತ್ತದೆ. ಇದರಲ್ಲಿ ಕೃಷಿ ಸಮಯದಲ್ಲಿ ನೀರಾವರಿಗಾಗಿ ಬಳಸುವ ನೀರು ಸೇರಿದೆ ಎಂದು ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ.
ಅಕ್ಕಿ ಆಧಾರಿತ ಎಥೆನಾಲ್ ನಲ್ಲಿ ಬಳಸುವ ಹೆಚ್ಚಿನ ನೀರು ಸಂಸ್ಕರಣೆಯಿಂದಲ್ಲ, ಕೃಷಿಯಿಂದ ಬರುತ್ತದೆ. 1 ಕೆಜಿ ಅಕ್ಕಿ ಬೆಳೆಯಲು ಸುಮಾರು 3,000-5,000 ಲೀಟರ್ ನೀರು ಬೇಕಾಗುತ್ತದೆ. ಸುಮಾರು 2.5-3 ಕೆಜಿ ಅಕ್ಕಿಯಿಂದ ಒಂದು ಲೀಟರ್ ಎಥೆನಾಲ್ ಉತ್ಪಾದಿಸಲಾಗುತ್ತದೆ. ಇದರಿಂದ ಒಟ್ಟು ನೀರಿನ ಬಳಕೆ ಸರಿಸುಮಾರು 10,000 ಲೀಟರ್ ಗಿಂತ ಹೆಚ್ಚು ಆಗುತ್ತದೆ. ಇದಕ್ಕೆ ಹೋಲಿಸಿದರೆ, ಮೆಕ್ಕೆಜೋಳಕ್ಕೆ ಸುಮಾರು 4,670 ಲೀಟರ್ ಮತ್ತು ಕಬ್ಬಿಗೆ ಸುಮಾರು 3,630 ಲೀಟರ್ ನೀರು ಅಗತ್ಯವಿದೆ.
ಒಂದು ಕೆಜಿ ಅಕ್ಕಿ ಬೆಳೆಯಲು ಸರಿಸುಮಾರು 3,000 ಲೀಟರ್ ನೀರು ಬೇಕಾಗುತ್ತದೆ, ಆದರೆ ಒಂದು ಟನ್ ಅಕ್ಕಿ ಕೇವಲ 470 ಲೀಟರ್ ಎಥೆನಾಲ್ ಅನ್ನು ನೀಡುತ್ತದೆ.
"ಎಥೆನಾಲ್ ಗಿರಣಿಗಳು ಹೆಚ್ಚಿನ ಪ್ರಮಾಣದ ತ್ಯಾಜ್ಯ ನೀರನ್ನು ಉತ್ಪಾದಿಸುತ್ತವೆ. ಇದು ಸರಿಯಾಗಿ ಸಂಸ್ಕರಿಸದಿದ್ದರೆ ಮೇಲ್ಮೈ ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ," ಎಂದು ಅಂಜಲ್ ಪ್ರಕಾಶ್ ಹೇಳಿದ್ದಾರೆ.
ಈ ಬಗ್ಗೆ ಮೊದಲು ಕಿಸಾನ್ ತಕ್ ನ ಸಂಪಾದಕ ಓಂ ಪ್ರಕಾಶ್ ವರದಿ ಮಾಡಿದ್ದು, ತೀವ್ರ ವ್ಯತಿರಿಕ್ತತೆಯನ್ನು ಎತ್ತಿ ತೋರಿಸಿದ್ದಾರೆ. ಒಬ್ಬ ರೈತ ಸುಮಾರು 3,000ರಿಂದ 5,000 ಲೀಟರ್ ನೀರನ್ನು ಬಳಸಿಕೊಂಡು 1 ಕೆಜಿ ಅಕ್ಕಿಯನ್ನು ಬೆಳೆದಾಗ, ಸಂಪನ್ಮೂಲಗಳ ಕ್ಷೀಣತೆಗೆ ಅವರನ್ನು ಹೆಚ್ಚಾಗಿ ದೂಷಿಸಲಾಗುತ್ತದೆ. ಆದರೂ, ಕೇವಲ ಒಂದು ಲೀಟರ್ ಎಥೆನಾಲ್ ಉತ್ಪಾದಿಸಲು ಕೈಗಾರಿಕೆಗಳು 10,000 ಲೀಟರ್ಗಿಂತ ಹೆಚ್ಚು ನೀರನ್ನು ಬಳಸುತ್ತವೆ. ಆದರೆ ನೀರಿನ ಬಿಕ್ಕಟ್ಟಿಗೆ ಈ ಉದ್ಯಮವನ್ನು ಎಂದಿಗೂ ದೂಷಿಸಲಾಗುವುದಿಲ್ಲ ಎಂದು ಓಂ ಪ್ರಕಾಶ್ ಹೇಳಿದ್ದಾರೆ.
ಭಾರತದಲ್ಲಿ ಈಗಾಗಲೇ ನೀರಿನ ಕೊರತೆ ಇದೆ
ಎಥೆನಾಲ್ ಮಿಶ್ರಣಕ್ಕೆ ಒತ್ತು ನೀಡುತ್ತಿರುವುದು ಆತಂಕಕಾರಿ ಹಿನ್ನೆಲೆಯಲ್ಲಿ ನಡೆಯುತ್ತಿದೆ. ನೀತಿ ಆಯೋಗದ ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ (CWMI) 2030ರ ವೇಳೆಗೆ ದಿಲ್ಲಿ, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ 21 ಪ್ರಮುಖ ನಗರಗಳಲ್ಲಿ ಅಂತರ್ಜಲ ಶೂನ್ಯ ತಲುಪಬಹುದು ಎಂದು ಎಚ್ಚರಿಸಿದೆ.
ಭಾರತದ ಒಟ್ಟು ಎಥೆನಾಲ್ ಉತ್ಪಾದನಾ ಸಾಮರ್ಥ್ಯ 1,822 ಕೋಟಿ ಲೀಟರ್ಗಳಷ್ಟಿದ್ದು, ಈಗಾಗಲೇ ನೀರಿನ ಕೊರತೆಯಿರುವ ರಾಜ್ಯಗಳಲ್ಲಿ ಅಸಮಾನವಾಗಿ ಕೇಂದ್ರೀಕೃತವಾಗಿದೆ. ಉದಾಹರಣೆಗೆ, ವಿದರ್ಭ ಮತ್ತು ಮರಾಠವಾಡದ ರೈತರು ಕುಡಿಯುವ ನೀರಿಗಾಗಿ ಹೋರಾಡುತ್ತಿದ್ದರೂ ಸಹ, ಮಹಾರಾಷ್ಟ್ರವು 396 ಕೋಟಿ ಲೀಟರ್ ಗಳ ಒಟ್ಟು ಸಾಮರ್ಥ್ಯದ ಸ್ಥಾವರಗಳನ್ನು ಹೊಂದಿದೆ.
ಈ ಮಧ್ಯೆ, ಉತ್ತರ ಪ್ರದೇಶ ಮತ್ತು ಕರ್ನಾಟಕದ ಎಥೆನಾಲ್ ಸ್ಥಾವರಗಳು ತೀವ್ರವಾಗಿ ಖಾಲಿಯಾಗಿವೆ ಎಂದು ಗುರುತಿಸಲಾದ ಅದೇ ಅಂತರ್ಜಲ ನಿಕ್ಷೇಪಗಳಿಂದ ನೀರನ್ನು ಪಡೆಯುತ್ತಿವೆ.
ಭಾರತದಲ್ಲಿ ಎಥೆನಾಲ್ ಮಿಶ್ರಣದಲ್ಲಿ ಅಕ್ಕಿಯ ಬಳಕೆಯು ಇನ್ನೂ ಹೊಸದಾಗಿದ್ದರೂ, ರಾಷ್ಟ್ರವು ಪ್ರಾಥಮಿಕವಾಗಿ ಕಬ್ಬಿನ ಬಳಕೆಯನ್ನು ಅವಲಂಬಿಸಿದೆ. ಆದರೆ ಕಬ್ಬು ಕೂಡ ನೀರಿನ ಮೇಲೆ ಪರಿಣಾಮ ಬೀರುತ್ತದೆ-ಒಂದು ಲೀಟರ್ ಎಥೆನಾಲ್ ಗೆ 3,636 ಲೀಟರ್ ನೀರನ್ನು ಬಳಸುತ್ತದೆ.
"ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಹಲವಾರು ಎಥೆನಾಲ್ ಸ್ಥಾವರಗಳು ನೆಲೆಗೊಂಡಿವೆ, ಏಕೆಂದರೆ ಅವುಗಳಿಗೆ ಆಹಾರ ಸಾಮಗ್ರಿಗಳು ಸುಲಭವಾಗಿ ಲಭ್ಯವಿರುತ್ತವೆ," ಎಂದು ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಫೈನಾನ್ಶಿಯಲ್ ಅನಾಲಿಸಿಸ್ (IEEFA) ದ ಇಂಧನ ತಜ್ಞೆ ಸ್ವಾತಿ ಶೇಷಾದ್ರಿ ಹೇಳಿದ್ದಾರೆ.
ವರ್ಷಗಳ ಕಾಲ ಕಬ್ಬು ಬೆಳೆಯುವುದರಿಂದ ಈ ಪ್ರದೇಶಗಳಲ್ಲಿ ನೀರಿನ ಮಟ್ಟ ಕುಸಿದಿದೆ; ಎಥೆನಾಲ್ ಸ್ಥಾವರಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಿವೆ. ಇದಲ್ಲದೆ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ, ಅಲ್ಲಿ ಈಗಾಗಲೇ ಅಂತರ್ಜಲ ಒತ್ತಡ ತೀವ್ರವಾಗಿದೆ. ಕಬ್ಬು ಆಧಾರಿತ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ನೀರಿನ ಕೊರತೆ ಇನ್ನಷ್ಟು ಉಲ್ಬಣಗೊಳ್ಳಬಹುದು ಎಂಬ ಕಳವಳ ವ್ಯಕ್ತವಾಗಿದೆ.
ಅದೇ ರೀತಿ, ವರ್ಷಗಳಿಂದ ಅಂತರ್ಜಲ ಕ್ಷೀಣಿಸುವಿಕೆಗೆ ಪಂಜಾಬ್ ಮತ್ತು ಹರಿಯಾಣದ ರೈತರನ್ನು ದೂಷಿಸಲಾಗುತ್ತಿತ್ತು. ಈಗ ಅದೇ ಬೆಳೆಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ಇಂಧನ ತಯಾರಿಸಲು ಬಳಸಲಾಗುತ್ತಿದೆ. ಅವುಗಳನ್ನು ಹಸಿರು ಶಕ್ತಿ ಎಂದು ಕರೆಯಲಾಗುತ್ತಿದೆ.
ವಿರೋಧಾಭಾಸವನ್ನು ನಿರ್ಲಕ್ಷಿಸುವುದು ಕಷ್ಟ. ಭಾರತದ ನಗರಗಳು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದ ಎಥೆನಾಲ್ ಮಿಶ್ರಣ ಕಾರ್ಯಕ್ರಮವು ತೈಲ ಆಮದುಗಳನ್ನು ಕಡಿಮೆ ಮಾಡುವುದು ಮತ್ತು ಹೊರಸೂಸುವಿಕೆಯನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿದೆ. ಆದರೆ ಎಥೆನಾಲ್ ಉತ್ಪಾದನೆಯು ನೀರಿನ ಅಭಾವವನ್ನು ಸೃಷ್ಟಿಸುವುದರಿಂದ, ಈ ಕಾರ್ಯತಂತ್ರದ ದೀರ್ಘಕಾಲೀನ ಸುಸ್ಥಿರತೆಯ ಬಗ್ಗೆ ಪುನರ್ವಿಮರ್ಶಿಸಲು ನೀತಿ ನಿರೂಪಕರನ್ನು ಒತ್ತಾಯಿಸುತ್ತದೆ.
ಪರಿಸರ ವಾಸ್ತವಗಳೊಂದಿಗೆ ಇಂಧನ ಗುರಿಗಳನ್ನು ಸಮತೋಲನಗೊಳಿಸಲು ಕಡಿಮೆ ನೀರಿನ-ಆಧಾರಿತ ಕಚ್ಚಾ ವಸ್ತುಗಳು ಮತ್ತು ಎರಡನೇ ತಲೆಮಾರಿನ ಜೈವಿಕ ಇಂಧನಗಳ ಕಡೆಗೆ ಬದಲಾವಣೆಯನ್ನು ತಜ್ಞರು ಸೂಚಿಸುತ್ತಾರೆ.

