ಡೆಹ್ರಾಡೂನ್: ಉತ್ತರಾಖಂಡದ ರುದ್ರ ಪ್ರಯಾಗದಲ್ಲಿನ ಕೇದಾರನಾಥ ಮಾರ್ಗದಲ್ಲಿ ಸಿಲುಕಿಕೊಂಡಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭಾರಿ ಮಳೆಯಿಂದ ಮಂಗಳವಾರ ತಡರಾತ್ರಿ ಸೋನ್ಪ್ರಯಾಗ್ ಮತ್ತು ಗೌರಿಕುಂಡದ ನಡುವಿನ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು.
ಇದರಿಂದ ಮುಖ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಯಾತ್ರಿಕರು ಮಧ್ಯದಲ್ಲಿ ಸಿಲುಕಿದ್ದರು.
ನಿರಂತರ ಉರುಳುತ್ತಿದ್ದ ಬಂಡೆಗಳು, ಭಾರೀ ಮಳೆ, ಕತ್ತಲೆ ಮತ್ತು ಸವಾಲಿನ ಪರ್ವತ ಪ್ರದೇಶದ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರಿಗೆ ಅತ್ಯಂತ ಕಷ್ಟಕರ ಪರಿಸ್ಥಿತಿ ಎದುರಾಗಿತ್ತು.
ರುದ್ರಪ್ರಯಾಗ್ನ ಜಿಲ್ಲಾ ನಿಯಂತ್ರಣ ಕೊಠಡಿ(ಡಿಸಿಆರ್) ರಾತ್ರಿ 9.16ರ ಸುಮಾರಿಗೆ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ(ಎಸ್ಡಿಆರ್ಎಫ್) ಮಾಹಿತಿ ನೀಡಿತ್ತು. ಅದರನ್ವಯ, ಸೋನ್ಪ್ರಯಾಗದಿಂದ ರಕ್ಷಣಾ ತಂಡವು ಅಗತ್ಯ ಉಪಕರಣಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿತ್ತು.
ನಂತರ, ಎಸ್ಡಿಆರ್ಎಫ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಜಂಟಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸಿಲುಕಿಕೊಂಡಿದ್ದ 10,450 ಯಾತ್ರಿಕರಿಗೆ ಕಾಲಕಾಲಕ್ಕೆ ಮಾರ್ಗದರ್ಶನ ನೀಡಿದವು. ಬಳಿಕ, ಸುರಕ್ಷಿತವಾಗಿ ಸ್ಥಳಾಂತರ ಮಾಡಿದವು. ಜೆಸಿಬಿ ಮೂಲಕ ಮಣ್ಣು ಮತ್ತು ಬಂಡೆಗಳನ್ನು ತೆರವು ಮಾಡಲಾಗಿದ್ದು, ಇತ್ತೀಚಿನ ಮಾಹಿತಿ ಪ್ರಕಾರ, ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ಯಾತ್ರಿಕರಿಗೆ ಹೈ ಅಲರ್ಟ್ ನೀಡಲಾಗಿದೆ ಎಂದು ಎಸ್ಡಿಆರ್ಎಫ್ ಕಮಾಂಡೆಂಟ್ ಅರ್ಪಣ್ ಯಧುವಂಶಿ ಹೇಳಿದ್ದಾರೆ.

