ನವದೆಹಲಿ: ಎಬೋಲಾ ಪೀಡಿತ ಆಫ್ರಿಕಾದ ದೇಶಗಳಿಂದ ಬರುವ ಅಥವಾ ಅಂತಹ ದೇಶಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತವು ಆರೋಗ್ಯ ಸಲಹೆಯನ್ನು ನೀಡಿದೆ. ರೋಗಲಕ್ಷಣಗಳು ಅಥವಾ ಸೋಂಕಿನ ಇತಿಹಾಸ ಹೊಂದಿರುವವರು ವಲಸೆ ಅನುಮತಿ ಪಡೆಯುವ ಮೊದಲು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಗೆ ತಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.
ಕಾಂಗೊ, ಉಗಾಂಡಾ ಮತ್ತು ದಕ್ಷಿಣ ಸುಡಾನ್ನಿಂದ ಬರುವ ಪ್ರಯಾಣಿಕರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್ಎಸ್) ಸಲಹೆಯನ್ನು ಬಿಡುಗಡೆ ಮಾಡಿದೆ, ಇವೆಲ್ಲವನ್ನೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಹೆಚ್ಚಿನ ಅಪಾಯದ ದೇಶಗಳು ಎಂದು ವರ್ಗೀಕರಿಸಿದೆ.
ವಿಮಾನ ನಿಲ್ದಾಣ ಆರೋಗ್ಯ ವಿಭಾಗವು (ಎಪಿಎಚ್ಒ) ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಸಲಹೆಯನ್ನು ಪ್ರದರ್ಶಿಸಿದೆ. ಜ್ವರ, ಸುಸ್ತು, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ, ಗಂಟಲು ನೋವು ಮತ್ತು ರಕ್ತಸ್ರಾವದಂತಹ ಲಕ್ಷಣಗಳ ಬಗ್ಗೆ ಪ್ರಯಾಣಿಕರು ಎಚ್ಚರದಿಂದಿರಬೇಕು ಎಂದು ಇದು ಸಲಹೆ ನೀಡಿದೆ.
ಶಂಕಿತ ಅಥವಾ ದೃಢಪಟ್ಟ ಎಬೋಲಾ ರೋಗಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಪ್ರಯಾಣಿಕರು ತಕ್ಷಣ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ ಅಥವಾ ಆರೋಗ್ಯ ಕಚೇರಿಗೆ ವರದಿ ಮಾಡಬೇಕೆಂದು ಅದು ತಿಳಿಸಿದೆ.
ಎಪಿಎಚ್ಒ ಪ್ರಕಾರ, ಭಾರತಕ್ಕೆಬಂದು 21 ದಿನಗಳ ಒಳಗೆ ಯಾವುದೇ ಪ್ರಯಾಣಿಕರಲ್ಲಿ ರೋಗಲಕ್ಷಣ ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕು ಎಂದೂ ಸಲಹೆ ನೀಡಲಾಗಿದೆ.
ಬುಧವಾರ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಅವರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದರು. ಎಬೋಲಾ ಹರಡುವಿಕೆ ತಡೆಗೆ ಸಿದ್ಧತೆ ಮತ್ತು ರೋಗಿಗಳಿಗೆ ಸ್ಪಂದನಾ ಕ್ರಮ, ಜಾಗೃತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಎಬೋಲಾ ಪ್ರಕರಣ ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆದರೂ, ವಿಶ್ವ ಆರೋಗ್ಯ ಸಂಸ್ಥೆಯು ಎಬೋಲಾ ಕುರಿತಾಗಿ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತವು ಸಕ್ರಿಯವಾಗಿ ಜಾಗೃತಿ, ಕಣ್ಗಾವಲು ಮತ್ತು ಚಿಕಿತ್ಸಾ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

