ನವದೆಹಲಿ: ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಭೌಮತ್ವದ ರಕ್ಷಣೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಅವರು ಗಡಿ ಭಾಗಗಳಲ್ಲಿ ಹಿಂದೆಂದೂ ಕಾಣದಂತಹ ಜೀರೋ ಟಾಲರೆನ್ಸ್ ನೀತಿಯನ್ನು ಪ್ರಕಟಿಸಿದ್ದಾರೆ. ಭಾರತದ ಅಂತಾರಾಷ್ಟ್ರೀಯ ಗಡಿಯ ಸುತ್ತಲಿನ 0 ರಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾನೂನುಬಾಹಿರವಾಗಿ ತಲೆಎತ್ತಿರುವ ಪ್ರತಿಯೊಂದು ಅಕ್ರಮ ಕಟ್ಟಡ ಹಾಗೂ ಒತ್ತುವರಿಗಳನ್ನು ಸಂಪೂರ್ಣವಾಗಿ ನೆಲಸಮ ಮಾಡುವಂತೆ ಆಡಳಿತ ಯಂತ್ರಕ್ಕೆ ಗೃಹ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಈ ಬಗ್ಗೆ ರಾಜಸ್ಥಾನದ ಬಿಕಾನೇರ್ನಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಭದ್ರತಾ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ ಸಚಿವರು, ರಾಷ್ಟ್ರೀಯ ಭದ್ರತೆಗೆ ಕಂಟಕವಾಗಿರುವ ಅಕ್ರಮ ನುಸುಳುವಿಕೆ, ಮಾದಕ ದ್ರವ್ಯ ಜಾಲ ಹಾಗೂ ಆರ್ಥಿಕ ಅಪರಾಧಗಳನ್ನು ಬುಡಸಮೇತ ಕಿತ್ತೆಸೆಯಲು ಕೇಂದ್ರ ಗೃಹ ಸಚಿವಾಲಯವು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ (DM) ಅತಿ ಹೆರಾವಾದ ಹೊಣೆಗಾರಿಕೆಯನ್ನು ವಹಿಸಿದೆ.
ನಕಲಿ ಗುರುತಿನ ಚೀಟಿ ಮತ್ತು ಶ್ಯಾಡೋ ಕಂಪನಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್!
ಗಡಿ ಭಾಗಗಳಲ್ಲಿ ನಡೆಯುವ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಕಠಿಣ ನಿಗಾ ಇಡುವಂತೆ ಬ್ಯಾಂಕ್ಗಳಿಗೆ ಸೂಚಿಸಿರುವ ಗೃಹ ಸಚಿವಾಲಯ, ಅಕ್ರಮ ಹಣದ ಹರಿವನ್ನು ತಡೆಯಲು ಬಿಗಿ ಕ್ರಮ ಕೈಗೊಂಡಿದೆ. ಗಡಿ ಜಿಲ್ಲೆಗಳಲ್ಲಿರುವ ದೊಡ್ಡ ದೊಡ್ಡ ವ್ಯಾಪಾರ ಸಂಸ್ಥೆಗಳ ಹಣಕಾಸಿನ ಮೂಲಗಳನ್ನು ಪರಿಶೀಲಿಸುವುದು, ಸೈಬರ್ ಅಪರಾಧಗಳಿಗೆ ಬಳಕೆಯಾಗುವ ಮ್ಯೂಲ್ ಅಕೌಂಟ್ ಹಾಗೂ ಕಳ್ಳಮಾರ್ಗದ ನಕಲಿ ಕಂಪನಿಗಳನ್ನು ಪತ್ತೆಹಚ್ಚಿ ಮುಚ್ಚಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ವಿಶೇಷವಾಗಿ ಗಡಿ ಭಾಗದಲ್ಲಿ ದೇಶವಿರೋಧಿ ಕೃತ್ಯಗಳಿಗಾಗಿ ಸೃಷ್ಟಿಸಲಾಗಿರುವ ನಕಲಿ ಆಧಾರ್ ಕಾರ್ಡ್ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲು ಮತ್ತು ಗಡಿಯಾಚೆಗಿನ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಗೃಹ ಸಚಿವರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೈಟೆಕ್ ಟಾಸ್ಕ್ ನೀಡಿದೆ.
ಭಾರತ-ಪಾಕ್ ಗಡಿಯ 5 ಜಿಲ್ಲೆಗಳ ರಕ್ಷಣೆಗೆ 360-ಡಿಗ್ರಿ ಕಾವಲು ಕೋಟೆ!
ಬಿಕಾನೇರ್ನಲ್ಲಿ ನಡೆದ ಈ ಹೈ-ವೋಲ್ಟೇಜ್ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಹಿರಿಯ ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಐದು ಪ್ರಮುಖ ಗಡಿ ಜಿಲ್ಲೆಗಳಾದ - ಬಿಕಾನೇರ್, ಜೈಸಲ್ಮೇರ್, ಬಾರ್ಮರ್, ಶ್ರೀ ಗಂಗಾನಗರ ಮತ್ತು ಫಲೋದಿಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು (SP) ಭಾಗವಹಿಸಿದ್ದರು.
ಈ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ಗಡಿ ಭಾಗದ ಪ್ರತಿಯೊಬ್ಬ ನಾಗರಿಕ, ರಾಜ್ಯ ಆಡಳಿತ ಯಂತ್ರ ಮತ್ತು ಕೇಂದ್ರೀಯ ಭದ್ರತಾ ಏಜೆನ್ಸಿಗಳನ್ನು ಒಟ್ಟಿಗೆ ಜೋಡಿಸಿ ಪ್ರತಿಯೊಂದು ಜಿಲ್ಲೆಗೂ '360-ಡಿಗ್ರಿ ಭದ್ರತಾ ಕವಚವನ್ನು ರೂಪಿಸಬೇಕು ಎಂದು ಒತ್ತಿಹೇಳಿದ್ದಾರೆ. ಅಲ್ಲದೆ, ನುಸುಳುವಿಕೆ, ಭಯೋತ್ಪಾದನೆಗೆ ಧನಸಹಾಯ ಮತ್ತು ಗಡಿಯಾಚೆಗಿನ ಅಪರಾಧಗಳನ್ನು ತಡೆಯಲು ಗಡಿ ರಕ್ಷಣಾ ಪಡೆ (BSF), ಸಿಬಿಡಿಟಿ (CBDT), ಎನ್ಸಿಬಿ (NCB) ಮತ್ತು ರಾಜ್ಯ ಪೊಲೀಸರು ಒಟ್ಟಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ ಮತ್ತು 2 ತಿಂಗಳ ಗಡುವು!
ಗಡಿ ಗ್ರಾಮಗಳ ಕೊನೆಯ ಜನರಿಗೂ ಸರ್ಕಾರದ ಆಡಳಿತವನ್ನು ತಲುಪಿಸಲು 'ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ' (VVP)-II ಅನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಗಡಿ ಹಳ್ಳಿಗಳಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಕಲ್ಯಾಣ ಯೋಜನೆಗಳು 100 ಪ್ರತಿಶತ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆಡಳಿತಕ್ಕೆ ಆದೇಶಿಸಲಾಗಿದೆ. ಇದೇ ವೇಳೆ ಸೈಬರ್ ಅಪರಾಧಗಳ ವಿರುದ್ಧ ಹೋರಾಡಲು '1930' ಕಾಲ್ ಸೆಂಟರ್ ಸಹಾಯವಾಣಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.
ಈ ಎಲ್ಲಾ ಕಠಿಣ ಕ್ರಮಗಳ ಕುರಿತು ಇನ್ನು ಸರಿಯಾಗಿ ಎರಡು ತಿಂಗಳ ನಂತರ ನಾನು ಮತ್ತೊಮ್ಮೆ ಪರಿಶೀಲನಾ ಸಭೆ ನಡೆಸಲಿದ್ದೇನೆ. ಅಷ್ಟರೊಳಗೆ ಎಲ್ಲಾ ಗಡಿ ಜಿಲ್ಲೆಗಳು ಫಲಿತಾಂಶ ಆಧಾರಿತ ಕಾಂಕ್ರೀಟ್ ವರದಿಯೊಂದಿಗೆ ಸಜ್ಜಾಗಬೇಕು ಎಂದು ಅಮಿತ್ ಷಾ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಕೇಂದ್ರ ಗೃಹ ಸಚಿವರ ಈ ಭೀಕರ ಬುಲ್ಡೋಜರ್ ಆದೇಶವು ಗಡಿ ಭಾಗದಲ್ಲಿ ಅಕ್ರಮ ವಸಾಹತು ಹೂಡಿದ್ದ ನುಸುಳುಕೋರರು ಮತ್ತು ಮಾಫಿಯಾಗಳಲ್ಲಿ ನಡುಕ ಹುಟ್ಟಿಸಿದೆ

