ಕಠ್ಮಂಡು: ಕಠ್ಮಂಡು ಕಣಿವೆಯ ನದಿ ದಂಡೆಗಳಲ್ಲಿ ನೇಪಾಳ ಸರ್ಕಾರ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿದೆ. ಶನಿವಾರವೂ ನೂರಾರು ಅಕ್ರಮ ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಸಂಕಷ್ಟಕ್ಕೆ ಸಿಲುಕಿರುವ ಜನರೊಂದಿಗೆ ಸಂವೇದನೆಯಿಂದ ನಡೆದುಕೊಳ್ಳುವಂತೆ ವಿರೋಧ ಪಕ್ಷಗಳು ಆಗ್ರಹಿಸಿವೆ.
ನದಿ ದಂಡೆಯ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಕ್ರಿಟ್ ಕಟ್ಟಡ ಸೇರಿದಂತೆ ವಿವಿಧ ಮಾದರಿಯ ನಿರ್ಮಾಣಗಳನ್ನು ತೆರವು ಮಾಡಲಾಗಿದೆ. ಸ್ವಯಂಭು, ಬಾಲಾಜು ಮತ್ತು ಧೋವಿಖೋಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿ ನಿಯೋಜಿಸಿ ಈವರೆಗೆ 2,000ಕ್ಕೂ ಹೆಚ್ಚು ಅಕ್ರಮ ವಸತಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ.
'ಹಲವು ವರ್ಷಗಳಿಂದ ವಾಸಿಸುತ್ತಿದ್ದವರಿಗೆ ಕಾಲಾವಕಾಶ ನೀಡದೇ ಮತ್ತು ಪರ್ಯಾಯ ವ್ಯವಸ್ಥೆ ಮಾಡದೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುತ್ತಿದೆ. ಭೂರಹಿತರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಮಳೆಗಾಲದ ಹೊತ್ತಿಗೆ ಪುನರ್ವಸತಿ ಕಲ್ಪಿಸಬೇಕು' ಎಂದು ಸಂಸದ ಮತ್ತು ನೇಪಾಳ ಕಾಂಗ್ರೆಸ್ ಮುಖಂಡ ಕೆ.ಸಿ. ಅರ್ಜುನ್ ನರಸಿಂಗ್ ಆಗ್ರಹಿಸಿದ್ದಾರೆ.
'ಪ್ರಧಾನಿ ಬಾಲೇಂದ್ರ ಶಾ ಅವರು ಈ ಜನರ ಬಗ್ಗೆ ಅನುಕಂಪ ಮತ್ತು ಕನಿಕರ ತೋರಬೇಕು' ಎಂದು ಝೆನ್ ಜಿ ಹೋರಾಟಗಾರ್ತಿ ರಕ್ಷಾಬಾಮ್ ಮನವಿ ಮಾಡಿದ್ದಾರೆ.

