ಲಖನೌ: ಉತ್ತರ ಪ್ರದೇಶದಲ್ಲಿ 26 ಗಂಟೆಗಳ ಅವಧಿಯಲ್ಲಿ ಮೂವರನ್ನು ಗುಂಡಿಕ್ಕಿ ಕೊಂದಿದ್ದ ನಿವೃತ್ತ ಯೋಧನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದ್ದಾರೆ.
'ಆರೋಪಿಯನ್ನು 45 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಸೋಮವಾರ ತಡರಾತ್ರಿ ಆರೋಪಿಯನ್ನು ಅಪರಾಧ ದೃಶ್ಯದ ಮರುಸೃಷ್ಟಿಗಾಗಿ ಕರೆದೊಯ್ಯಲಾಗಿತ್ತು.
ಈ ವೇಳೆ ಆತ ಪೊಲೀಸರ ಬಳಿಯಿದ್ದ ಪಿಸ್ತೂಲ್ ಕಿತ್ತುಕೊಂಡು ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಏನಿದು ಘಟನೆ?
ಅಮೃತಸರ ಮೂಲದ ಗುರುಪ್ರೀತ್ ಸಿಂಗ್ ಅವರು ಆರು ವರ್ಷಗಳ ಹಿಂದೆ ಸೇನೆಯಿಂದ ನಿವೃತ್ತರಾಗಿದ್ದರು. ಭಾನುವಾರ ಬೆಳಿಗ್ಗೆ ಸಕಲ್ದಿಹಾ ರೈಲ್ವೆ ನಿಲ್ದಾಣದ ಸಮೀಪ ಪ್ಯಾಸೆಂಜರ್ ರೈಲಿನಲ್ಲಿ ಘಾಜಿಪುರ ಜಿಲ್ಲೆಯ ಮನಗ್ರು ಎಂಬುವವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದರು.
ಅದೇ ದಿನ (ಭಾನುವಾರ) ಮಧ್ಯರಾತ್ರಿ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ನಿಲ್ದಾಣದ ಸಮೀಪ ಕೋಲ್ಕತ್ತ-ಜಮ್ಮು ತಾವಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಹಾರದ ಗಯಾ ಜಿಲ್ಲೆಯ ದಿನೇಶ್ ಶಾ ಎಂಬುವವರನ್ನು ಕುಟುಂಬದವರ ಎದುರೇ ಗುಂಡಿಕ್ಕಿ ಕೊಂದಿದ್ದರು. ಬಳಿಕ ಅಲ್ಲಿಂದಲೂ ತಪ್ಪಿಸಿಕೊಂಡಿದ್ದರು.
ಮರುದಿನ ಬೆಳಿಗ್ಗೆ (ಸೋಮವಾರ) ಚಂದೌಲಿಯ ಖಾಸಗಿ ಆಸ್ಪತ್ರೆಗೆ ನುಗ್ಗಿದ ಸಿಂಗ್, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದನು. ಘಟನೆ ಬಳಿಕ ಓಡಿಹೋಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಬಂಧನದ ಬೆನ್ನಲ್ಲೇ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

