ನವದೆಹಲಿ: ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಮೇ 3ರಂದು ನಡೆದ ನೀಟ್-ಯುಜಿ-2026 ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನೀಟ್ ಪರೀಕ್ಷೆ ರದ್ದಾಗಿರುವ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, '2026-27ನೇ ಸಾಲಿನ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈ ಭ್ರಷ್ಟ ಬಿಜೆಪಿ ಆಡಳಿತದಿಂದಾಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ತ್ಯಾಗ ಮತ್ತು ಕನಸುಗಳು ನುಚ್ಚುನೂರಾಗಿವೆ' ಎಂದು ಗುಡುಗಿದ್ದಾರೆ.
'ಕೆಲವು ತಂದೆಯಂದಿರು ಸಾಲ ಮಾಡಿದ್ದರು, ಕೆಲವು ತಾಯಂದಿರು ತಮ್ಮ ಒಡವೆಗಳನ್ನು ಮಾರಿದ್ದರು, ಲಕ್ಷಾಂತರ ಮಕ್ಕಳು ರಾತ್ರಿಯಿಡೀ ಎಚ್ಚರವಿದ್ದು ಓದಿದ್ದರು. ಆದರೆ, ಅವರಿಗೆ ಪ್ರತಿಯಾಗಿ ಸಿಕ್ಕಿದ್ದು ಮಾತ್ರ ಪ್ರಶ್ನೆ ಪತ್ರಿಕೆ ಸೋರಿಕೆ, ಸರ್ಕಾರದ ನಿರ್ಲಕ್ಷ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ವ್ಯವಸ್ಥಿತ ಭ್ರಷ್ಟಾಚಾರ' ಎಂದು ಆಕ್ರೋಶ ಹೊರಹಾಕಿದ್ದಾರೆ.
'ಇದು ಕೇವಲ ವೈಫಲ್ಯ ಮಾತ್ರವಲ್ಲ. ಬದಲಾಗಿ, ಯುವಜನತೆಯ ಭವಿಷ್ಯದ ವಿರುದ್ಧ ಎಸಗಿದ ಅಪರಾಧವಾಗಿದೆ. ಪ್ರತಿ ಬಾರಿಯೂ ಪ್ರಶ್ನೆ ಪತ್ರಿಕೆ ಮಾಫಿಯಾ ಯಾವುದೇ ಶಿಕ್ಷೆಯಿಲ್ಲದೆ ಸುಲಭವಾಗಿ ನುಣುಚಿಕೊಳ್ಳುತ್ತದೆ. ಆದರೆ, ಪ್ರಾಮಾಣಿಕ ವಿದ್ಯಾರ್ಥಿಗಳು ಶಿಕ್ಷೆ ಅನುಭವಿಸುವಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಈಗ ಲಕ್ಷಾಂತರ ವಿದ್ಯಾರ್ಥಿಗಳು ಮತ್ತೊಮ್ಮೆ ಅದೇ ಮಾನಸಿಕ ಒತ್ತಡ, ಆರ್ಥಿಕ ಹೊರೆ ಮತ್ತು ಅನಿಶ್ಚಿತತೆಯನ್ನು ಎದುರಿಸಬೇಕಾಗಿದೆ. ಒಬ್ಬ ವ್ಯಕ್ತಿಯ ಹಣೆಬರಹವು ಕಠಿಣ ಪರಿಶ್ರಮದಿಂದ ನಿರ್ಧರಿಸಲ್ಪಡದೆ, ಕೇವಲ ಹಣ ಮತ್ತು ಪ್ರಭಾವದಿಂದ ನಿರ್ಧರಿಸಲ್ಪಡುವುದಾದರೆ ಶಿಕ್ಷಣಕ್ಕೆ ಯಾವ ಅರ್ಥವಿರುತ್ತದೆ' ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರ ಪಾಲಿನ ಈ 'ಅಮೃತ ಕಾಲ'ವು ದೇಶದ ಪಾಲಿಗೆ 'ವಿಷ ಕಾಲ'ವಾಗಿ ಮಾರ್ಪಟ್ಟಿದೆ ಎಂದೂ ಅವರು ದೂರಿದ್ದಾರೆ.

