ರಾಂಚಿ: ಇತರರಂತೆ ನಾವಿರದೇ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ದೃಢ ಮನಸ್ಸು ಮಾಡಿದರೆ ವಿಶ್ವವೇ ನಮ್ಮ ಸಹಾಯಕ್ಕೆ ನಿಲ್ಲುತ್ತದೆ ಎಂಬ ಮಾತಿದೆ. ಗುರಿ ಸ್ಪಷ್ಟವಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಬ್ಬ ಏಳು ವರ್ಷದ ಬಾಲಕ ಮಾದರಿಯಾಗಿದ್ದಾನೆ. ಈತ ಶ್ರೀಲಂಕಾ ಮತ್ತು ಭಾರತದ ನಡುವಿನ ಸವಾಲಿನ ಸಮುದ್ರ ಈಜಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.
ಹೌದು, ಝಾರ್ಖಂಡ್ ರಾಜ್ಯದ ರಾಂಚಿಯ ಏಳು ವರ್ಷದ ಈಜುಗಾರ ಇಶಾಂಕ್ ಸಿಂಗ್ ಶ್ರೀಲಂಕಾ ಮತ್ತು ಭಾರತದ ನಡುವಿನ ಸವಾಲಿನ ಸಮುದ್ರ ಮಾರ್ಗವನ್ನು ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಾಲಕ ಇಷ್ಟು ಚಿಕ್ಕವಯಸ್ಸಿನಲ್ಲೇ ಅಪರೂಪದ ಸಾಧನೆ ಮಾಡಿದ್ದಾನೆ. ಅವರ ಸಾಹಸ ಇದೀಗ ವಿಶ್ವಾ ದಾಖಲೆಯ ಪಟ್ಟಿ ಸೇರಿದೆ. ನೆಟ್ಟಿಗರು ಬೇಶ್ ಎಂದಿದ್ದು, ಬಾಲಕನಿಗೆ ಶುಭ ಕೋರಿದ್ದಾರೆ.
9:50 ಗಂಟೆಯಲ್ಲಿ 29 ಕಿಮೀ ಈಜಿದ ಬಾಲಕ
ರಾಂಚಿಯ ಧುರ್ವಾದ ಯುವ ಈಜುಗಾರ ಈ ಇಶಾಂಕ್. ಶ್ರೀಲಂಕಾದ ತಲೈಮನ್ನಾರ್ನಿಂದ ಭಾರತದ ಧನುಷ್ಕೋಡಿಯವರೆಗೆ ಅಪಾಯಕಾರಿ ಪಾಕ್ ಜಲಸಂಧಿ 29 ಕಿಲೋ ಮಿಟರ್ ಅನ್ನು ಕೇವಲ 9 ಗಂಟೆ 50 ನಿಮಿಷಗಳಲ್ಲಿ ಈಜುತ್ತಲೇ ಇತಿಹಾಸ ನಿರ್ಮಿಸಿದ್ದಾನೆ. ಈ ಸಮುದ್ರ ಮಾರ್ಗವನ್ನು ದಾಟಿದ ವಿಶ್ವದ ಅತ್ಯಂತ ಕಿರಿಯ ಈಜುಗಾರರ ಪಟ್ಟಿ ಸೇರುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಅತ್ಯಂತ ಕಿರಿಯ, ವೇಗದ ಈಜುಗಾರ
ಇಶಾಂಕ್ ನೆನ್ನೆ ಗುರುವಾರ (ಏಪ್ರಿಲ್ 30) ಶ್ರೀಲಂಕಾದಿಂದ ಭಾರತದ ಧನುಷ್ಕೋಡಿವರೆಗೆ ಈಜಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದಕ್ಕಾಗಿ ಇಶಾಂಕ್ ಕಠಿಣ ತರಬೇತಿ ಪಡೆದಿದ್ದು. ಶಿಸ್ತು ಮತ್ತು ಬಲವಾದ ದೃಢಸಂಕಲ್ಪದಿಂದಾಗಿ ಈ ಫಲಿತಾಂಶ ಬಂದಿದೆ. ಅವರ ಈ ಸಾಧನೆ ಕಂಡು ಯೂನಿವರ್ಸಲ್ ರೆಕಾರ್ಡ್ಸ್ ಫೋರಂನಿಂದ ಅತ್ಯಂತ ಕಿರಿಯ ಮತ್ತು ವೇಗದ ಪಾಕ್ ಜಲಸಂಧಿ ಈಜುಗಾರ ವಿಶ್ವ ದಾಖಲೆ ಪ್ರಮಾಣಪತ್ರ ನೀಡಿ ಗೌರವಿಸಿದೆ.
ನಿತ್ಯ ನಾಲ್ಕೈದು ಗಂಟೆ ಈಜು ತರಬೇತಿ
ನಿತ್ಯ ಇಶಾಂಕ್ ರಾಂಚಿಯ ಧುರ್ವಾ ಅಣೆಕಟ್ಟಿನಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ನಿರಂತರವಾಗಿ ಈಜುತ್ತಿದ್ದ. ಬಾಲಕನಿಗೆ ತರಬೇತುದಾರರಾದ ಅಮನ್ ಕುಮಾರ್ ಜೈಸ್ವಾಲ್ ಮತ್ತು ಬಜರಂಗ್ ಕುಮಾರ್ ಅವರು ಮಾರ್ಗದರ್ಶನ ಮಾಡಿದ್ದಾರೆ. ಬಾಲಕನಿಗಾಗಿಯೇ ವಿಶೇಷ ತರಬೇತಿ ನೀಡಿದ್ದಾರೆ. ಇಂದು ಬಾಲಕ ತನ್ನ ರಾಜ್ಯಕ್ಕೆ ಮಾತ್ರವಲ್ಲದೇ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾನೆ ಎಂದು ಜನರು ಹಾಡಿ ಹೊಗಳುತ್ತಿದ್ದಾರೆ.
ಇಲ್ಲಿ ವಿಡಿಯೋ ವೀಕ್ಷಿಸಿ
ಇಶಾಂಕ್ ಸಿಂಗ್ ಝಾರ್ಖಂಡ್ ರಾಜ್ಯದ ರಾಂಚಿಯ ಡಿಎವಿ ಶ್ಯಾಮಲಿಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇಶಾಂಕ್ ಸಾಧನೆಗೆ ಅವರ ಶಾಲೆಯ ಆಡಳಿತ ಮಂಡಳಿ ಪ್ರಶಂಸಿಸಿದೆ. ಪ್ರಾಂಶುಪಾಲರು ಶಾಲೆಗೆ ಇಶಾಂಕ್ ಹೆಮ್ಮೆ ತಂದಿದ್ದಾರೆ. ಜಗದಲಕ್ಕೆ ಶಾಲೆ ಹೆಸರು ಕೇಳುವಂತೆ ಮಾಡಿದ್ದಾರೆ. ವಿಶ್ವ ದಾಖಲೆ ನಿರ್ಮಿಸುವುದು ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ್ದಾನೆ ಎಂದು ಶ್ಲಾಘಿಸಿದ್ದಾರೆ.
ಸೂಕ್ತ ಮಾರ್ಗದರ್ಶನದ ಜೊತೆಗೆ ಇಶಾಂಕ್ನ ಸಮರ್ಪಣಾ ಭಾವ, ಸರಿಯಾದ ಮಾರ್ಗದರ್ಶನದಿಂದ ಆತ ಗುರಿ ಸಾಧಿಸಿದ್ದಾನೆ. ಬಾಲಕನಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂದು ಆತನ ಶಿಕ್ಷಕರು, ರಾಜ್ಯದ ಜನರು ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣಗಳಿಂದಲೂ ಬರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

