ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷ ಉಲ್ಬಣಗೊಂಡರೆ ಕಚ್ಚಾ ತೈಲ ಪೂರೈಕೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳನ್ನು ಗಮನದಲ್ಲಿಟ್ಟುಕೊಂಡು, ಕನಿಷ್ಠ 30 ದಿನಗಳ ಬೇಡಿಕೆಗೆ ಸಾಕಾಗುವಷ್ಟು ಎಲ್ಪಿಜಿ ದಾಸ್ತಾನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರವು ಸರಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟ ಕಂಪೆನಿಗಳಿಗೆ ಸೂಚಿಸಿದೆ.
ಸಾಮಾನ್ಯ ವಾಣಿಜ್ಯ ದಾಸ್ತಾನುಗಳಿಗೆ ಹೆಚ್ಚುವರಿಯಾಗಿ ಸಂಗ್ರಹಣಾ ಸಾಮರ್ಥ್ಯವನ್ನು ಸೃಷ್ಟಿಸಲು ಯೋಜನೆಗಳನ್ನು ಸಿದ್ಧಪಡಿಸುವಂತೆ ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳಿಗೆ ಈ ನಿರ್ದೇಶನ ನೀಡಲಾಗಿದೆ.
''ನಾವು ಆಯಕಟ್ಟಿನ ದಾಸ್ತಾನುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ತೈಲ ಮಾರುಕಟ್ಟೆ ಕಂಪೆನಿಗಳು ತಮ್ಮ ಬಳಿ ಕನಿಷ್ಠ 30 ದಿನಗಳ ಎಲ್ಪಿಜಿ ದಾಸ್ತಾನು ಹೊಂದಲು ಯೋಜನೆಯೊಂದನ್ನು ರೂಪಿಸುವಂತೆ ಕೇಳಲಾಗಿದೆ. ಅವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ'' ಎಂದು ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.
ಪಶ್ಚಿಮ ಏಷ್ಯಾದ ಯುದ್ಧವು ಭಾರತ ಸೇರಿದಂತೆ ಜಾಗತಿಕ ಇಂಧನ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಿದೆ. ಕೊಲ್ಲಿ ಪ್ರದೇಶದ ದೇಶಗಳಿಂದ ಬರುತ್ತಿದ್ದ ಭಾರತದ ಶೇ.40ರಷ್ಟು ಕಚ್ಚಾ ತೈಲ ಆಮದು, ಶೇ.65ರಷ್ಟು ನೈಸರ್ಗಿಕ ಅನಿಲ ಹಾಗೂ ಶೇ.90ರಷ್ಟು ಎಲ್ಪಿಜಿ ಪೂರೈಕೆಯು ಮೂರು ತಿಂಗಳ ಸುದೀರ್ಘ ಸಂಘರ್ಷದಿಂದಾಗಿ ಸ್ಥಗಿತಗೊಂಡಿದೆ.

