ನವದೆಹಲಿ: ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಂಖ್ಯೆಯನ್ನು 34 ರಿಂದ 38ಕ್ಕೆ ಹೆಚ್ಚಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ವಿಷಯವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಭಾನುವಾರ ಖಚಿತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ (ಘಿ) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮೇಘ್ವಾಲ್, 'ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸಲು ರಾಷ್ಟ್ರಪತಿಗಳು ಅಸ್ತು ಎಂದಿದ್ದಾರೆ. ಇದಕ್ಕಾಗಿ 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ, 2026' ಹೊರಡಿಸಲಾಗಿದೆ. ಇದು 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956'ಕ್ಕೆ ಮತ್ತಷ್ಟು ತಿದ್ದುಪಡಿ ತಂದಿದೆ' ಎಂದು ತಿಳಿಸಿದ್ದಾರೆ.
ಮೇ 5 ರಂದು ಪ್ರಧಾನಿ ನರೇಂದ್ರ ಮೋದಿ(ಓಚಿಡಿeಟಿಜಡಿಚಿ ಒoಜi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು 4 ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿತ್ತು. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ನ್ಯಾಯಾಧೀಶರ ಸಂಖ್ಯೆಯನ್ನು 33 ರಿಂದ 37ಕ್ಕೆ ಹೆಚ್ಚಿಸಲು 'ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, 2026' ಅನ್ನು ಸಂಸತ್ತಿನಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿತ್ತು.
ಕಾನೂನು ತಜ್ಞರಿಂದ ವ್ಯಾಪಕ ಸ್ವಾಗತ
ಕೇಂದ್ರದ ಈ ನಿರ್ಧಾರವನ್ನು ಕಾನೂನು ವಲಯದ ಗಣ್ಯರು ಸ್ವಾಗತಿಸಿದ್ದಾರೆ. ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ದಾವೆಗಳನ್ನು ನಿಭಾಯಿಸಲು ಇದೊಂದು ಸಕಾಲಿಕ ಕ್ರಮ ಎಂದು ಬಣ್ಣಿಸಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ, ಹಿರಿಯ ವಕೀಲ ವಿಕಾಸ್ ಸಿಂಗ್ ಮಾತನಾಡಿ, 'ಕೋರ್ಟ್ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪ್ರಕರಣ ವಿಲೇವಾರಿ ದರ ಶ್ಲಾಘನೀಯವಾಗಿದ್ದರೂ, ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ನಿಭಾಯಿಸಲು ಹೆಚ್ಚು ನ್ಯಾಯಾಧೀಶರ ಅಗತ್ಯವಿದೆ' ಎಂದಿದ್ದಾರೆ.
ಇದಕ್ಕೆ ಪೂರಕವಾಗಿ ಮೂಲಸೌಕರ್ಯಗಳ ಅಗತ್ಯವನ್ನೂ ಸಿಂಗ್ ಒತ್ತಿ ಹೇಳಿದರು. ಈ ವರ್ಷದ ಅಂತ್ಯದ ವೇಳೆಗೆ ಸುಪ್ರೀಂ ಕೋರ್ಟ್ನ ಹೊಸ ಕಟ್ಟಡದ ಒಂದು ಭಾಗ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಆಗ 38 ನ್ಯಾಯಾಧೀಶರಿಗೆ ಆರಾಮವಾಗಿ ಸ್ಥಳಾವಕಾಶ ಕಲ್ಪಿಸಬಹುದು. ಮುಂದಿನ ದಿನಗಳಲ್ಲಿ ಸಂಪೂರ್ಣ ಹೊಸ ಕಟ್ಟಡ ಸಿದ್ಧವಾದರೆ ಸುಮಾರು 50 ನ್ಯಾಯಾಧೀಶರ ಅಗತ್ಯ ಬೀಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಉಪಾಧ್ಯಕ್ಷ, ಹಿರಿಯ ವಕೀಲ ಸಚಿನ್ ಪುರಿ, ಇದೊಂದು 'ಸಕಾರಾತ್ಮಕ ಮತ್ತು ಅತ್ಯಗತ್ಯ ಕ್ರಮ' ಎಂದು ಬಣ್ಣಿಸಿದ್ದಾರೆ. ನ್ಯಾಯಾಧೀಶರ ಸಂಖ್ಯೆ ಹೆಚ್ಚಳವು ಕಾಲದ ಅಗತ್ಯವಾಗಿತ್ತು. ಇದು ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಾಯ ಮಾಡುತ್ತದೆ. ಇದರಿಂದ ಕಕ್ಷಿದಾರರು ಮತ್ತು ಕಾನೂನು ಸಮುದಾಯಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ವಕೀಲೆ ಜೂಹಿ ಅರೋರಾ ಗುಪ್ತಾ ಅವರ ಪ್ರಕಾರ, 'ನ್ಯಾಯಾಂಗದ ದಕ್ಷತೆ ಹೆಚ್ಚಿಸಲು ಮತ್ತು ಶೀಘ್ರ ನ್ಯಾಯ ಒದಗಿಸಲು ಇದೊಂದು ನಿರ್ಣಾಯಕ ಹೆಜ್ಜೆ' ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತು ಸಂಕೀರ್ಣತೆಯಿಂದಾಗಿ ಪ್ರಸ್ತುತ ನ್ಯಾಯಾಧೀಶರ ಬಲಕ್ಕೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವುದು ಕಷ್ಟಕರವಾಗಿತ್ತು ಎಂದು ಅವರು ವಿವರಿಸಿದರು.
ಕೇವಲ ಸಂಖ್ಯೆ ಹೆಚ್ಚಳ ಸಾಲದು, ಸುಧಾರಣೆಗಳೂ ಬೇಕು: ತಜ್ಞರ ಅಭಿಮತ
ಸುಪ್ರೀಂ ಕೋರ್ಟ್ ವಕೀಲ ಸುಮಿತ್ ಗೆಹ್ಲೋಟ್, ಈ ನಿರ್ಧಾರವನ್ನು ಸ್ವಾಗತಿಸಿದರೂ, "ಕೇವಲ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸಿದರೆ ಸಾಲದು. ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಸುಮಾರು 95,000 ಪ್ರಕರಣಗಳ ವಿಲೇವಾರಿಗೆ ರಚನಾತ್ಮಕ ಸುಧಾರಣೆಗಳು ಮತ್ತು ಉತ್ತಮ ಪ್ರಕರಣ ನಿರ್ವಹಣಾ ವ್ಯವಸ್ಥೆಗಳು ಬೇಕು," ಎಂದು ಒತ್ತಿ ಹೇಳಿದ್ದಾರೆ.
ಹಿರಿಯ ವಕೀಲ ಹೇಮಂತ್ ಶಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನ್ಯಾಯಾಧೀಶರ ಸಂಖ್ಯೆ ಹೆಚ್ಚಳದಿಂದ ಪ್ರಕರಣಗಳ ಹೊರೆ ಕಡಿಮೆಯಾಗಬಹುದು, ಆದರೆ ಇದೊಂದೇ ಪರಿಹಾರವಲ್ಲ. 2026ರಲ್ಲಿ ಹಲವು ನ್ಯಾಯಾಧೀಶರು ನಿವೃತ್ತರಾಗಲಿದ್ದಾರೆ. ಆಗ ಮತ್ತೆ ಪ್ರಕರಣಗಳ ಬಾಕಿ ಉಳಿಯುವ ಸಾಧ್ಯತೆ ಇದೆ. ಅನಗತ್ಯ ದಾವೆಗಳನ್ನು ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು," ಎಂದು ಅವರು ಸಲಹೆ ನೀಡಿದ್ದಾರೆ.
ಆದರೆ, ಕೇಂದ್ರದ ಮಾಜಿ ಕಾನೂನು ಕಾರ್ಯದರ್ಶಿ ಪಿ.ಕೆ. ಮಲ್ಹೋತ್ರಾ ಅವರು, 'ಕೇವಲ ನ್ಯಾಯಾಧೀಶರ ಸಂಖ್ಯೆ ಹೆಚ್ಚಳದಿಂದ ದೊಡ್ಡ ಮಟ್ಟದ ನ್ಯಾಯಾಂಗ ಸುಧಾರಣೆ ಆಗದು. ಸುಪ್ರೀಂ ಕೋರ್ಟ್ ಸಾಂವಿಧಾನಿಕ ವಿಷಯಗಳ ಮೇಲೆ ಹೆಚ್ಚು ಗಮನಹರಿಸಲು ಅನುಕೂಲವಾಗುವಂತೆ ಪ್ರಾದೇಶಿಕ ಮೇಲ್ಮನವಿ ನ್ಯಾಯಾಲಯಗಳನ್ನು ಸ್ಥಾಪಿಸುವುದನ್ನು ಸರ್ಕಾರ ಪರಿಗಣಿಸಬೇಕು,' ಎಂದು ಸೂಚಿಸಿದ್ದಾರೆ.
ಒಟ್ಟಾರೆಯಾಗಿ, ಕೇಂದ್ರದ ಈ ನಿರ್ಧಾರಕ್ಕೆ ಕಾನೂನು ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ನ್ಯಾಯ ವಿತರಣಾ ವ್ಯವಸ್ಥೆಯಲ್ಲಿನ ವಿಳಂಬ ಮತ್ತು ಪ್ರಕರಣಗಳ ಹೊರೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವ್ಯಾಪಕ ನ್ಯಾಯಾಂಗ ಸುಧಾರಣೆಗಳ ಅಗತ್ಯವಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

