ಬೋಂಗಾವ್: ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ 45 ದಿನದೊಗಳಗೆ ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಭೂಮಿ ನೀಡಲು ಬದ್ಧ ಎಂದು ಪಶ್ಚಿಮ ಬಂಗಾಳ ಸಚಿವ ಅಶೋಕ್ ಕೀರ್ತಾನಿಯಾ ಹೇಳಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬೋಂಗಾವ್ ಉತ್ತರ ಕ್ಷೇತ್ರದ ಶಾಸಕರೂ ಆಗಿರುವ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಅಶೋಕ್, ತಮ್ಮ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಅಲ್ಲದೆ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಸಭೆಯನ್ನೂ ಮಾಡಿದರು.
ಉತ್ತರ 24 ಪರಗಣ ಜಿಲ್ಲೆಯಲ್ಲಿ ಭೂ ಸ್ವಾದೀನ ಪ್ರಕ್ರಿಯೆಯು ಸಮಾಧಾನಕರವಾಗಿದ್ದು, ಬಸೀರ್ಹಟ್ ಪ್ರದೇಶದಲ್ಲಿ ಸಮಸ್ಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
'ನಾನು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಬಸೀರ್ಹಟ್ನ ಮೂರು ಪ್ರದೇಶ ಹೊರತುಪಡಿಸಿ ಬೇರೆಲ್ಲೂ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲಿನ ಕೆಲವು ನಿವಾಸಿಗಳು ಗಡಿ ಪ್ರದೇಶದಿಂದ ಸ್ಥಳಾಂತರವಾಗಲು ನಿರಾಕರಿಸುತ್ತಿದ್ದಾರೆ, ಬೇಲಿ ಹಾಕಲಾಗುವ ಪ್ರದೇಶಕ್ಕೆ ಒಳಪಡುವ ಕೆಲವು ಕುಟುಂಬಗಳು ಪುನರ್ವಸತಿಗೆ ನಿರಾಕರಿಸುತ್ತಿದ್ದಾರೆ' ಎಂದು ಅವರು ಮಾಧ್ಯಮದವರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಬಿಎಸ್ಎಫ್ಗೆ ಭೂಮಿ ಹಸ್ತಾಂತರಕ್ಕೆ ಇರುವ ತೊಡಕುಗಳನ್ನು ಒಂದು ವಾರದೊಳಗಾಗಿ ನಿವಾರಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ. ಒಂದು ವಾರದೊಳಗೆ ಅವರನ್ನು ಮನವೊಲಿಸಬೇಕು ಎಂದು ನಾನು ಅವರಿಗೆ ತಿಳಿಸಿದ್ದೇನೆ ಎಂದು ಸಚಿವ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇ 11ರಂದು ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಬಿಎಸ್ಎಫ್ಗೆ ಭೂಮಿ ಹಸ್ತಾಂತರ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕಾಗಿ 45 ದಿನಗಳ ಕಾಲಾವಕಾಶ ಕೂಡ ನಿಗದಿ ಮಾಡಿತ್ತು. ಸುಮಾರು 600 ಎಕರೆ ಭೂಮಿ ಹಸ್ತಾಂತರಿಸುವ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾಗಿತ್ತು.
ಬಾಂಗ್ಲಾದೇಶದೊಂದಿಗೆ ಭಾರತ ಸುಮಾರು 4,097 ಕಿ.ಮೀ ಗಡಿ ಹಂಚಿಕೊಂಡಿದ್ದು, ಈ ಪೈಕಿ 2,217 ಕಿ.ಮೀ ಪಶ್ಚಿಮ ಬಂಗಾಳದೊಂದಿದೆ ಇದೆ.

