ಕಾಸರಗೋಡು: ಜಿಲ್ಲೆ ರಚನೆಯಾದ 42ನೇ ವಾರ್ಷಿಕೋತ್ಸವದ ಅಂಗವಾಗಿ, ಜಿಲ್ಲಾಡಳಿತ, ಕಲೆಕ್ಟರೇಟ್ ಅಕ್ಷರ ಗ್ರಂಥಾಲಯ ಮತ್ತು ಜಿಲ್ಲಾ ಮಾಹಿತಿ ಕಚೇರಿ ವತಿಯಿಂದ 'ಬೀಚ್ ರನ್' ಕಾರ್ಯಕ್ರಮ ನೆಲ್ಲಿಕುಂಜೆ ಕಡಪ್ಪುರದಲ್ಲಿ ಜರುಗಿತು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ) ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಸೇರಿದಂತೆ ಬೀಚ್ ಓಟದಲ್ಲಿ ನಾಲ್ನೂರಕ್ಕೂ ಹೆಚ್ಚುಮಂದಿ ಪಾಲ್ಗೊಂಡಿದ್ದರು.
ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಧಗ್ವಜತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಕಾಸರಗೋಡಿನಲ್ಲಿ ಇಂತಹ ಕಾರ್ಯಕ್ರಮ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಹಕಾರಿ. ಪ್ರವಾಸೋದ್ಯಮ ವಲಯವನ್ನು ಮತ್ತಷ್ಟು ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಓಟದಲ್ಲಿ, ವಿ.ವಿ. ಚಂದ್ರನ್ 33 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಓಟ ಮುಗಿಸಿ ಪ್ರಥಮ ಸ್ಥಾನ ಪಡೆದರು. ಪಿ.ವಿ. ಬಿಜು ಎರಡನೇ ಸ್ಥಾನ ಮತ್ತು ಅಬ್ದುಲ್ ರೆಹಮಾನ್ ಶಹದ್ ಮೂರನೇ ಸ್ಥಾನ ಪಡೆದರು. ವಾರ್ಡ್ ಕೌನ್ಸಿಲರ್ ರಾಮಕೃಷ್ಣ ಹೊಳ್ಳ ಓಟದಲ್ಲಿ ಭಾಗವಹಿಸಿ ಸಂಪೂರ್ಣ ದೂರವನ್ನು ಪೂರ್ಣಗೊಳಿಸಿದರು
ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಾಫರ್ ಕಮಲ್, ಹಮೀದ್ ಬೆದಿರ, ಸಮೀನಾ ಮುಜೀಬ್, ಮೆಹರುನ್ನೀಸಾ, ಡಿಟಿಪಿಸಿ ಕಾರ್ಯದರ್ಶಿ ಜೆ.ಕೆ. ಜಿತೇಶ್ ಕುಮಾರ್, ವಿವಿಧ ಡಿಟಿಪಿಸಿ ಪ್ರತಿನಿಧಿಗಳು ಮತ್ತು ವಾರ್ಡ್ ಕೌನ್ಸಿಲರ್ಗಳು ಪಾಲ್ಗೊಂಡಿದ್ದರು.
ಕಾಸರಗೋಡು ಜಿಲ್ಲೆ ರಚನೆಯ 42ನೇ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಡಳಿತವು ಜಿಲ್ಲಾ ವಾರ್ತಾ ಕಚೇರಿಯ ಸಹಯೋಗದೊಂದಿಗೆ 'ಕಾಸರಗೋಡು @ 42' ಎಂಬ ವಿಷಯದ ಕುರಿತು ಉದ್ಯೋಗಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು.

