ಕಾಸರಗೋಡು: ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ಸಂಪರ್ಕದ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಕೊನೆಗೂ ಹಸಿರು ನಿಶಾನಿ ಲಭಿಸಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ಸುಮಾರು 19ಕಿ.ಮೀ ರಸ್ತೆಯ ಅಭಿವೃದ್ಧಿಗಗಿ 29.83 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಗೆ ಕೊನೆಗೂ ಅನುಮೋದನೆ ಲಭಿಸಿದೆ. ಎಡರಂಗ ಸರ್ಕಾರದ ಕಾಲಾವಧಿಯಲ್ಲೇ ರಸ್ತೆ ಅಭಿವೃದ್ಧಿ ಬಗ್ಗೆ ಯೋಜನೆ ತಯಾರಿಸಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದರೂ, ನೂತನ ಐಕ್ಯರಂಗ ಸರ್ಕಾರ ರಚನೆಯಾಗುತ್ತಿದ್ದಂತೆ ಇದು ವೇಗ ಪಡೆದುಕೊಂಡಿದೆ. ಪ್ರಸಕ್ತ ಕಾಮಗಾರಿ ಬಗ್ಗೆ ಕಾಸರಗೋಡು ಶಾಸಕ ಮಾಹಿನ್ ಹಾಜಿ ಅವರು ಕೆಐಐಎಫ್ಬಿ(ಕಿಫ್ಬಿ) ಸಿಇಒ ಮಿನಿ ಆಂಟನಿ ಐಎಎಸ್, ಕೆಆರ್ಎಫ್ಬಿ ಯೋಜನಾ ನಿರ್ದೇಶಕ ಅಶೋಕ್ ಕುಮಾರ್ ಅವರೊಂದಿಗೆ ಚರ್ಚೆ ನಡೆಸಿ ಕೆಲಸ ಶೀಘ್ರ ಆರಂಭಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ಆಡಳಿತಾತ್ಮಕ ಅನುಮೋದನೆ ಲಭಿಸಿದ್ದರೂ, ತಾಂತ್ರಿಕ ಅನುಮೋದನೆ ಲಭಿಸದೆ, ಚೆರ್ಕಳ-ಕಲ್ಲಡ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ವಿಳಂಬವಾಗಿ ಸಾಗಿತ್ತು. ವರ್ಷಗಳ ಹಿಂದೆಯಷ್ಟೆ ಲಕ್ಷಾಂತರ ರೂ. ವೆಚ್ಚದಲ್ಲಿ ರಸ್ತೆಕಾಮಗಾರಿ ನಡೆಸಲಾಗಿದ್ದು, ಕೆಲಸದಲ್ಲಿ ಗುತ್ತಿಗೆದಾರನೊಬ್ಬ ಲೋಪವೆಸಗಿರುವುದಲ್ಲದೆ, ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವುದನ್ನು ಪತ್ತೆಹಚ್ಚಲಾಗಿದ್ದರೂ, ಈ ಗುತ್ತಿಗೆದಾರನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವುದು ನಾಗರಿಕರ ಅಸಮಧಾನಕ್ಕೂ ಕಾರಣವಾಗಿತ್ತು.
ರಾಜ್ಯ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ವ್ಯಾಪಕ ಜನಾಕ್ರೋಶಕ್ಕೂ ಕಾರಣವಾಗಿತ್ತು. ಚೆರ್ಕಳದಿಂದ ಬದಿಯಡ್ಕ ವರೆಗೆ ಬೃಹತ್ ಹೊಂಡಗಳಿಗೆ ತೇಪೆ ಹಚ್ಚುವ ಕಾತರ್ಯ ನಡೆದಿದ್ದರೂ, ಅಲ್ಲಿಂದ ಮುಂದೆ ಉಕ್ಕಿನಡ್ಕ ವರೆಗೆ ರಸ್ತೆ ಸ್ಥಿತಿ ಅಯೋಮಯವಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಖಾಸಗಿ ಬಸ್ ಮಾಲಿಕರು ಮತ್ತು ಕಾರ್ಮಿಕರು ಒಂದು ದಿನದ ಸಾಂಕೇತಿಕ ಹರತಾಳವನ್ನೂ ಕೈಗೊಂಡಿದ್ದರು. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಶಿಥಿಲ ರಸ್ತೆಯಲ್ಲಿನ ಪ್ರಯಾಣ ಚಾಲಕರು ಹಾಗೂ ಜನರಲ್ಲಿ ವ್ಯಾಪಕ ಸಮಸ್ಯೆ ಹುಟ್ಟುಹಾಕಿದೆ.
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ಕಳೆದ ಎರಡು ವರ್ಷಗಳಿಂದ ಘನವಾಹನಗಳ ಸಂಚಾರದಿಂದ ಅತ್ಯಂತ ಶಿಥಿಲಾವಸ್ಥೆಯತ್ತ ಸಾಗಿದೆ. ಕಾಸರಗೋಡು, ಕಾಞಂಗಾಡು ಭಾಗಕ್ಕೆ ಭಾರಿ ಪ್ರಮಾಣದಲ್ಲಿ ಕಗ್ಗಲ್ಲು, ಜಲ್ಲಿಕಲ್ಲು, ಎಂಸ್ಯಾಂಡ್, ಮರಳು ಸೇರಿದಂತೆ ಖನಿಜಗಳನ್ನು ಲಾರಿಗಳಲ್ಲಿ ಅತಿಯಾದ ಭಾರದೊಂದಿಗೆ ಸಾಗಿಸುತ್ತಾ ಬಂದಿರುವುದರಿಂದ ರಸ್ತೆ ಹೆಚ್ಚು ಶಿಥಿಲಗೊಳ್ಳಲು ಕಾರಣವಾಗುತ್ತಿದ್ದರೂ, ಅಧಿಕಾರಿಗಳ ಮೌನ ಸಂಶಯಕ್ಕೆ ಕಾರಣವಾಗುತ್ತಿದೆ. ಮಳೆಗಾಲದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಹಾಯವಾಗುವ ರೀತಿಯಲ್ಲಿ ಬೃಹತ್ ಹೊಂಡಗಳನ್ನು ಮುಚ್ಚುವಂತೆಯೂ ನಾಗರಿಕರು ಆಗ್ರಹಿಸಿದ್ದಾರೆ.
ಅಭಿಮತ:
ಚೆರ್ಕಳ-ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕ ವರೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 29.83 ಕೋಟಿ ರೂ. ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿ ಲಭ್ಯವಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಕಡಿಮೆ ಮೊತ್ತದ ಬಿಡ್ ಹಾಕಿದವರಿಗೆ ಗುತ್ತಿಗೆ ನೀಡಲು ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕೆಲಸ ರಂಭಿಸಲಾಗಿಲ್ಲ.
ಸಿ.ಜೆ ಕೃಷ್ಣನ್, ಸಯಾಯಕ ಮಹಾ ಅಭಿಯಂತ
'ಕಿಫ್ಬಿ' ಕಾಸರಗೋಡು



