ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಸಂದರ್ಭದಲ್ಲಿ ಹೆಸರುಗಳನ್ನು ಅಳಿಸಲಾದ ಮಹಿಳೆಯರಿಗೆ ರಾಜ್ಯ ಸರಕಾರದ 'ಅನ್ನಪೂರ್ಣ ಭಂಡಾರ' ಯೋಜನೆಯ ಪ್ರಯೋಜನಗಳು ಲಭಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಹಾಗೂ ಸಮಾಜ ಕಲ್ಯಾಣ ಸಚಿವೆ ಅಗ್ನಿಮಿತ್ರಾ ಪಾಲ್ ಅವರು ಸೋಮವಾರ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಈ ಯೋಜನೆಯಡಿ ಮಹಿಳೆಯರು ಮಾಸಿಕ 3,000 ರೂ.ಗಳ ಆರ್ಥಿಕ ನೆರವನ್ನು ಪಡೆಯಲಿದ್ದಾರೆ. ತೃಣಮೂಲ ಕಾಂಗ್ರೆಸ್ ಸರ್ಕಾರದ 'ಲಕ್ಷ್ಮಿ ಭಂಡಾರ' ಯೋಜನೆಯ ಬದಲು ನೂತನ ಯೋಜನೆಯು ಜೂ.1ರಿಂದ ಜಾರಿಗೊಳ್ಳಲಿದೆ. ಹಳೆಯ ಯೋಜನೆಯಡಿ ಫಲಾನುಭವಿಗಳು ಮಾಸಿಕ 1,500 ರೂ.ಗಳನ್ನು ಪಡೆಯುತ್ತಿದ್ದರು.
ಮತದಾರರ ಪಟ್ಟಿಗಳಲ್ಲಿ ಹೆಸರು ಇರುವ ಮಹಿಳೆಯರು ಮಾತ್ರ ಈ ಸೌಲಭ್ಯವನ್ನು ಪಡೆಯುತ್ತಾರೆ. ಅದಕ್ಕೂ ಮೊದಲು ವಿಶ್ಲೇಷಣೆ ನಡೆಯಲಿದೆ. ಲಕ್ಷ್ಮಿ ಭಂಡಾರ ಯೋಜನೆಯ ಫಲಾನುಭವಿಗಳಾಗಿದ್ದು ಎಸ್ಐಆರ್ ಸಂದರ್ಭದಲ್ಲಿ ಹೆಸರುಗಳು ಅಳಿಸಲ್ಪಟ್ಟ ಹೆಚ್ಚಿನವರಿಗೆ ಈಗ ಈ ಸೌಲಭ್ಯ ಸಿಗುವುದಿಲ್ಲ ಎಂದು ಪಾಲ್ ತಿಳಿಸಿದ್ದಾರೆ.
ಮೃತ ಪಟ್ಟಿರುವವರು, ಭಾರತೀಯ ನಾಗರಿಕರಲ್ಲದವರು ಲಕ್ಷ್ಮಿ ಭಂಡಾರ ಸೌಲಭ್ಯವನ್ನು ಹೇಗೆ ಪಡೆಯಲು ಸಾಧ್ಯ? ಫಲಾನುಭವಿಗಳ ಪೈಕಿ ಯಾರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ತೆಗೆದುಹಾಕಲಾಗಿದೆ ಎಂಬ ಬಗ್ಗೆ ವಿಶ್ಲೇಷಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗವು ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ನಂತರ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದವು.
ಮತದಾರರ ಪಟ್ಟಿಗಳಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿರುವ ಮೇಲ್ಮನವಿಗಳು ನ್ಯಾಯಮಂಡಳಿಗಳ ಮುಂದೆ ಬಾಕಿಯಿರುವ ವ್ಯಕ್ತಿಗಳನ್ನೂ ಸದ್ಯಕ್ಕೆ ಯೋಜನೆಯಿಂದ ಹೊರಗಿಡಲಾಗುವುದು ಎಂದು ಪಾಲ್ ಅವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸೋಮವಾರ ನಡೆದ ಮೊದಲ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಅಸ್ತಿತ್ವದಲ್ಲಿರುವ ಯಾವುದೇ ಕಲ್ಯಾಣ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಅಸ್ತಿತ್ವದಲ್ಲಿಲ್ಲದ, ನಕಲಿ ಫಲಾನುಭವಿಗಳು ಮತ್ತು ಭಾರತೀಯರಲ್ಲದವರು ಸೌಲಭ್ಯಗಳನ್ನು ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ 'ಆಯುಷ್ಮಾನ್ ಭಾರತ್' ಆರೋಗ್ಯ ವಿಮಾ ಯೋಜನೆ ಸೇರಿದಂತೆ ಹಲವಾರು ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರಲು ಸಂಪುಟವು ಅನುಮೋದನೆ ನೀಡಿದೆ.

