ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಆರಂಭವಾಗಿದ್ದು ಫೆಬ್ರುವರಿ 28ರಂದು. ಅಂದಿನಿಂದಲೂ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ತಲೆದೋರಿತು. ಆಮದು ರಫ್ತುಗಳಲ್ಲಿ ವ್ಯತ್ಯಾಸಗಳು ಉಂಟಾದವು. ವಿವಿಧ ದೇಶಗಳಲ್ಲಿ ಇಂಧನ ತುಟ್ಟಿ ಆಯಿತು. ಕೆಲವು ದೇಶಗಳಲ್ಲಿ ಪಡಿತರ ರೀತಿಯಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಆದರೆ, ಭಾರತದಲ್ಲಿ ಮಾತ್ರ ಯುದ್ಧದಿಂದ ಎಲ್ಪಿಜಿ ಕೊರತೆ ಸೇರಿ ಸಣ್ಣಪುಟ್ಟ ಸಮಸ್ಯೆಗಳು ಬಿಟ್ಟರೆ ದೊಡ್ಡ ಪರಿಣಾಮಗಳು ಉಂಟಾಗಿಲ್ಲ ಎನ್ನುವಂಥ ವಾತಾವರಣವೇ ಇತ್ತು. ಐದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಎದುರಾಗುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಅನುಸರಿಸಬೇಕಾಗಿರುವ ಕೆಲವು ಸಲಹೆಯನ್ನೂ ನೀಡಿದ್ದಾರೆ. ತೈಲ ದರ ಏರು ಹಾದಿಯಲ್ಲಿರುವುದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವುದು, ವಿದೇಶಿ ವಿನಿಯಮ ಮೀಸಲು ಸಂಗ್ರಹ ಕಡಿಮೆಯಾಗುತ್ತಿರುವುದು ಇವೇ ಮುಂತಾದ ಕಾರಣಗಳಿಂದ ಮೋದಿ ಅವರು ದೇಶದ ಜನರಿಗೆ ಕೆಲವು ಉಪಕ್ರಮಗಳನ್ನು ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಅವರು ನೀಡಿರುವ ಸಲಹೆಗಳು ಹಲವು ಅನುಮಾನ, ಆತಂಕಗಳಿಗೆ ಕಾರಣವಾಗಿವೆ. ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಾಗಲಿದೆ ಎನ್ನುವ ಸೂಕ್ಷ್ಮವನ್ನು ಪ್ರಧಾನಿ ಅವರ ಮಾತುಗಳು ಧ್ವನಿಸುತ್ತಿವೆ ಎಂದೂ ಹೇಳಲಾಗುತ್ತಿದೆ.
ದೇಶದ ಕೆಲವೆಡೆ ಪ್ರಧಾನಿ ಮೋದಿ ಅವರ ಸಲಹೆಗಳನ್ನು ಪಾಲಿಸಲಾಗುತ್ತಿದೆ. ಹೆಚ್ಚುವರಿ ವಾಹನಗಳನ್ನು ಸರ್ಕಾರಕ್ಕೆ ವಾಪಸ್ ನೀಡುವಂತೆ ಲಖನೌ ಮೇಯರ್ ಆದೇಶಿಸಿದ್ದಾರೆ. ಜನರನ್ನು ಮೆಟ್ರೊಗಳಲ್ಲಿ ಸಂಚರಿಸಲು ಉತ್ತೇಜಿಸಲು ಕೇಂದ್ರ ಸಚಿವ ರಾಮದಾಸ್ ಅಠವಳೆ ಮುಂಬೈನಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ. ಛತ್ತೀಸಗಢದ ಕಬೀರ್ಧಾಮ್ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಜೀಪುಗಳನ್ನು ಬಿಟ್ಟು ಸೈಕಲ್ಗಳಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಆದರೆ, ಪ್ರಧಾನಿ ಮೋದಿ ಅವರ ಮಾತುಗಳು ವಿವಿಧ ವಲಯಗಳ ಒಟ್ಟಾರೆ ಸ್ಥಿತಿಯ ಮೇಲೆ ಎಂಥ ಪರಿಣಾಮ ಬೀರಲಿವೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.
ಆಧಾರ: ಪಿಟಿಐ, ರಾಯಿಟರ್ಸ್, ಫೋಬ್ಸ್, ಡಿಜಿಸಿಐಎಸ್

