ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಒಟ್ಟು 14 ಮಂದಿ ಪೈಕಿ ಎಂಟು ಮಂದಿಗೆ ಈಗಾಗಲೇ ಜಾಮೀನು ದೊರೆತಿತ್ತು.
ಉಳಿದ ಆರು ಅರ್ಜಿದಾರರೂ ಅದೇ ಷರತ್ತುಗಳಡಿ ಜಾಮೀನು ಪಡೆಯಲು ಅರ್ಹರು ಎಂದು ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ ಹೇಳಿದ್ದಾರೆ.
ಮಾರ್ಚ್ 16ರಂದು ಗಂಗಾ ನದಿಯಲ್ಲಿ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ 14 ಮಂದಿಯನ್ನು ಬಂಧಿಸಲಾಗಿತ್ತು.
ಮೇ 15ರಂದು ಪ್ರಕರಣದಲ್ಲಿ ಐದು ಮಂದಿಗೆ ಜಾಮೀನು ನೀಡಿದ್ದ ನ್ಯಾಯಮೂರ್ತಿ ಶುಕ್ಲಾ, ಆರೋಪಿಗಳು ತಮ್ಮ ಕೃತ್ಯಗಳಿಗೆ ಕ್ಷಮೆಯಾಚಿಸಿದ್ದು, ಸಮಾಜಕ್ಕೆ ಉಂಟಾದ ನೋವಿನ ಬಗ್ಗೆ ಅವರ ಕುಟುಂಬಗಳೂ ವಿಷಾದ ವ್ಯಕ್ತಪಡಿಸಿವೆ ಎಂದು ಉಲ್ಲೇಖಿಸಿದ್ದರು ಎಂದು ವರದಿಯಾಗಿದೆ.
ಅದೇ ದಿನ ಪ್ರಕರಣದ ಇನ್ನೂ ಮೂವರು ಆರೋಪಿಗಳಿಗೆ ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಜಾಮೀನು ನೀಡಿದ್ದರು.
ಎಪ್ರಿಲ್ 1ರಂದು ವಾರಣಾಸಿಯ ಸೆಷನ್ ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಮಾರ್ಚ್ 23ರಂದು ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಯಾದವ್, ಆರೋಪಗಳು 'ಗಂಭೀರ ಸ್ವರೂಪದ್ದಾಗಿದೆ ಎಂದು ಜಾಮೀನು ನಿರಾಕರಿಸಿದ್ದರು.
ಉಳಿದ ಆರು ಮಂದಿಗೆ ಜಾಮೀನು ನೀಡುವುದರಿಂದ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಮೂರ್ತಿ ಶುಕ್ಲಾ ಸೋಮವಾರ ಹೇಳಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು, ಪೂಜಾಸ್ಥಳವನ್ನು ಅಪವಿತ್ರಗೊಳಿಸುವುದು ಹಾಗೂ ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಮಾಡುವ ಆರೋಪವನ್ನು ಹೊರಿಸಲಾಗಿದೆ.
ಇದರ ಜೊತೆಗೆ ಸಾರ್ವಜನಿಕ ಕಿರಿಕಿರಿ ಉಂಟುಮಾಡುವುದು, ಸಾರ್ವಜನಿಕ ಜಲಾಶಯದ ನೀರನ್ನು ಮಲಿನಗೊಳಿಸುವುದು, ಸಾರ್ವಜನಿಕ ಸೇವಕರ ಆದೇಶ ಪಾಲಿಸದಿರುವುದು ಹಾಗೂ ಜಲ ತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ ಕಾಯ್ದೆಯ ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

