ಕೋಲ್ಕತ್ತ: ಪಶ್ಚಿಮ ಬಂಗಾಳದ ನಿಯೋಜಿತ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇಂದು (ಶುಕ್ರವಾರ) ಸಂಜೆ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅವರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದ ಎರಡು ಗಂಟೆಗಳ ಬಳಿಕ ಸುವೇಂದು ಅವರು ಲೋಕಭವನಕ್ಕೆ ತೆರಳಿದ್ದಾರೆ.ಈ ವೇಳೆ ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್, ಸುಕಾಂತ ಮಜುಂದಾರ್ ಮತ್ತು ಸಂತನು ಠಾಕೂರ್, ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಸಹ-ವೀಕ್ಷಕ ಮೋಹನ್ ಚರಣ್ ಮಾಝಿ, ಬಿಜೆಪಿ ಬಂಗಾಳ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ, ಪಕ್ಷದ ರಾಜ್ಯ ಘಟಕದ ಇತರ ಹಿರಿಯ ನಾಯಕರು ಸೇರಿ ಹಲವರು ಸುವೇಂದು ಜೊತೆಗಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಉನ್ನತ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಸುಮಾರು 20 ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಶನಿವಾರ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುವೇಂದು ಅವರು ಬಂಗಾಳದ 9ನೇ ಹಾಗೂ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಳೆದ 55 ವರ್ಷಗಳಲ್ಲಿ ಜಿಲ್ಲಾ ಮಟ್ಟದಿಂದ ಬೆಳೆದು ಬಂದ ವ್ಯಕ್ತಿಯೊಬ್ಬರು ಸಿಎಂ ಆಗುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ 1971 ರಲ್ಲಿ ಅಜಯ್ ಮುಖರ್ಜಿ ಅವರು ಸಿಎಂ (ಜಿಲ್ಲಾ ಮಟ್ಟದಿಂದ ಬಂದವರು) ಆಗಿದ್ದರು. ವಿಶೇಷವೆಂದರೆ, ಅಜಯ್ ಮುಖರ್ಜಿ ಮತ್ತು ಸುವೇಂದು ಅಧಿಕಾರಿ ಇಬ್ಬರೂ ಮೇದಿನಿಪುರ ಪ್ರದೇಶಕ್ಕೆ ಸೇರಿದವರು.

