ನಿಕೋಸಿಯಾ: ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಶಾಂತಿ ಸ್ಥಾಪನೆಗೆ ಸಂಬಂಧಿಸಿದಂತೆ ಉಕ್ರೇನ್ ವಿದೇಶಾಂಗ ಸಚಿವ ಆಯಂಡ್ರಿ ಸಿಬಿಹಾ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಿದ್ದಾರೆ.
ಸೈಪ್ರಸ್ನಲ್ಲಿ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರುಗಳ ಅನೌಪಚಾರಿಕ ಸಭೆಯ ವೇಳೆ ಉಭಯ ನಾಯಕರುಗಳ ನಡುವೆ ಈ ಭೇಟಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿಈ ಕುರಿತು ಪೋಸ್ಟ್ ಮಾಡಿರುವ ಜೈಶಂಕರ್, ಈ ಸಭೆಯನ್ನು 'ಉಪಯುಕ್ತ' ಎಂದು ಬಣ್ಣಿಸಿದ್ದಾರೆ. 'ಉಕ್ರೇನ್ ಸಂಘರ್ಷ ಹಾಗೂ ದ್ವಿಪಕ್ಷೀಯ ಸಹಕಾರದ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು' ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣ, ಯುದ್ಧಭೂಮಿಯ ಬೆಳವಣಿಗೆ ಕುರಿತು 'ಅರ್ಥಪೂರ್ಣ'ವಾದ ಸಭೆ ನಡೆಯಿತು ಎಂದು ಉಕ್ರೇನ್ನ ವಿದೇಶಾಂಗ ಸಚಿವ ಆಯಂಡ್ರಿ ಸಿಬಿಹಾ ತಿಳಿಸಿದ್ದಾರೆ.
'ಕೀವ್ ಮೇಲೆ ರಷ್ಯಾ ಬೃಹತ್ ಮಟ್ಟದ ದಾಳಿ ನಡೆಸಿದರೂ ದೃಢಸಂಕಲ್ಪದೊಂದಿಗೆ ಚೇತರಿಸಿಕೊಳ್ಳುತ್ತಿದ್ದೇವೆ. ನಮ್ಮ ಸಂದೇಶ ಸ್ಪಷ್ಟವಾಗಿದೆ. ಈ ಯುದ್ಧವನ್ನು ಕೊನೆಗೊಳಿಸಿ ಶಾಂತಿ ಕಾಪಾಡಲು ಬಯಸುತ್ತೇವೆ' ಎಂದು ಹೇಳಿದ್ದಾರೆ.
'ಯುರೋಪ್ ತನ್ನ ಜವಾಬ್ದಾರಿಯನ್ನು ನಿಭಾಯಿಸುವಂತೆ ಭಾರತದ ಬಲವಾದ ಧ್ವನಿಯನ್ನು ನಾವು ಸ್ವಾಗತಿಸುತ್ತೇವೆ' ಎಂದು ತಿಳಿಸಿದ್ದಾರೆ.
ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ನಿಟ್ಟಿನಲ್ಲೂ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು. ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ನಿಯಮಿತವಾಗಿ ಸಂವಾದ ನಡೆಸಲು ಒಪ್ಪಿಕೊಳ್ಳಲಾಯಿತು.

