ನವದೆಹಲಿ: ಭಾರತದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣಾ ಫಲಿತಾಂಶಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ.
ಅಂತರರಾಷ್ಟ್ರೀಯ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಸುದೀರ್ಘ ಆಳ್ವಿಕೆ ಅಂತ್ಯಗೊಳಿಸಿದ್ದನ್ನು ಪ್ರಮುಖವಾಗಿ ವರದಿ ಮಾಡಿವೆ.
ಲಂಡನ್ನಿಂದ ನ್ಯೂರ್ಯಾಕ್ವರೆಗೆ ಇಸ್ಲಾಮಾಬಾದ್ನಿಂದ ಢಾಕಾವರೆಗೂ ಎಲ್ಲೆಡೆ ಮಮತಾ ಸೋಲು ಮತ್ತು ತಮಿಳುನಾಡಿನಲ್ಲಿ ನಟ ವಿಜಯ್ 'ಟಿವಿಕೆ' ಉದಯದ ಸುದ್ದಿಗಳೇ ಪ್ರಮುಖವಾಗಿವೆ.
ಬಿಬಿಸಿ: ಬಂಗಾಳ ರಾಜಕೀಯದಲ್ಲಿ ಕಮಲ ಅರಳುವುದು ಕಷ್ಟ ಎಂದೇ ಹೇಳಲಾಗುತ್ತಿದ್ದ ಪಶ್ಚಿಮ ಬಂಗಾಳವನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಗೆದ್ದುಕೊಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.
ಮೋದಿಯವರ 12 ವರ್ಷಗಳ ಅಧಿಕಾರವದಿಯಲ್ಲಿ ಇದು ಅತ್ಯಂತ ಮಹತ್ವದ ಸಾಧನೆ. ಇದು ಕೇವಲ ಒಬ್ಬ ಮುಖ್ಯಮಂತ್ರಿಯ ಸೋಲಲ್ಲ, ಬದಲಿಗೆ ಈಶಾನ್ಯ ಭಾರತದಲ್ಲಿ ಬಿಜೆಪಿಯ ಸುದೀರ್ಘ ಪಯಣದ ಯಶಸ್ಸು ಎಂದು ಬಣ್ಣಿಸಿದೆ.
ದಿ ಗಾರ್ಡಿಯನ್: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಜಯಭೇರಿ ಬಾರಿಸಿದೆ. ಈ ಫಲಿತಾಂಶ ಭಾರತದ ರಾಜಕೀಯ ಚಿತ್ರಣವನ್ನು ಬದಲಿಸಲಿದೆ ಮತ್ತು ಈಗಾಗಲೇ ದುರ್ಬಲವಾಗಿರುವ ವಿರೋಧ ಪಕ್ಷಗಳಿಗೆ ಮತ್ತೊಂದು ಹೊಡೆತ ಎಂದು ವಿಶ್ಲೇಷಿಸಿದೆ.
ನ್ಯೂಯಾರ್ಕ್ ಟೈಮ್ಸ್: ಪ್ರಧಾನಿ ಮೋದಿ ಅವರ ಹಿಂದೂತ್ವ, ರಾಷ್ಟ್ರೀಯವಾದ ನೀತಿಯಿಂದ ಟಿಎಂಸಿ ಭದ್ರಕೋಟೆಯನ್ನು ವಶಪಡಿಸಿಕೊಂಡಿದ್ದಾರೆ. ಬಂಗಾಳದ ಜಯವನ್ನು 'ಐತಿಹಾಸಿಕ' ಗೆಲುವು ಎಂದು ಕರೆದಿದೆ. ಇದೇ ವೇಳೆ ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆಯು ಸ್ಥಾಪಿತ ಪಕ್ಷಗಳಿಗಿಂತ ಉತ್ತಮ ಪ್ರದರ್ಶನ ನೀಡಿರುವುದನ್ನು 'ದೊಡ್ಡ ಅಚ್ಚರಿ' ಎಂದು ಬಣ್ಣಿಸಿದೆ.

ದಿ ವಾಷಿಂಗ್ಟನ್ ಪೋಸ್ಟ್: ಈ ಚುನಾವಣಾ ಫಲಿತಾಂಶವು ಪ್ರಧಾನಿ ಮೋದಿಯವರ ಮೂರನೇ ಅವಧಿಯ ಮಧ್ಯಭಾಗದಲ್ಲಿ ಅವರ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಿದೆ. 2029ರಲ್ಲಿ ಅವರು ನಾಲ್ಕನೇ ಅವಧಿಗೆ ಸ್ಪರ್ಧಿಸಲು ಇದು ದೊಡ್ಡ ವೇದಿಕೆಯಾಗಲಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ. ಕೇರಳದಲ್ಲಿ ಎಡಪಕ್ಷಗಳ ಸುದೀರ್ಘ ಆಳ್ವಿಕೆಯನ್ನು ಕಾಂಗ್ರೆಸ್ ಅಂತ್ಯಗೊಳಿಸಿರುವುದನ್ನೂ ಇದು ಉಲ್ಲೇಖಿಸಿದೆ.
ಡಾನ್: ಪಾಕಿಸ್ತಾನದ 'ಡಾನ್' ಪತ್ರಿಕೆಯು ಎಎಫ್ಪಿ ವರದಿಗಳನ್ನು ಉಲ್ಲೇಖಿಸಿ, ಮೋದಿಯವರ ರಾಷ್ಟ್ರೀಯವಾದಿ ಚಿಂತನೆ ವಿರೋಧ ಪಕ್ಷದ ಭದ್ರಕೋಟೆಯನ್ನು ಧೂಳೀಪಟ ಮಾಡಿದೆ ಎಂದು ಬರೆದಿದೆ. ನಿರುದ್ಯೋಗ ಮತ್ತು ವಿದೇಶಾಂಗ ನೀತಿಯ ಸವಾಲುಗಳ ನಡುವೆಯೂ ಈ ಗೆಲುವು ಮೋದಿಯವರಿಗೆ ಆನೆಬಲ ತಂದಿದೆ ಎಂದು ಹೇಳಿದೆ.
ಢಾಕಾ ಟ್ರಿಬ್ಯೂನ್: ಟ್ರಿಬ್ಯೂನ್ ಪತ್ರಿಕೆ ಸೇರಿದಂತೆ ಬಾಂಗ್ಲಾದೇಶದ ಮಾಧ್ಯಮಗಳು ತಮಿಳುನಾಡಿನ ಫಲಿತಾಂಶದ ಬಗ್ಗೆ ಹೆಚ್ಚು ವರದಿ ಪ್ರಕಟಿಸಿವೆ. ಅನುಭವಿ ರಾಜಕಾರಣಿ ಎಂ.ಕೆ. ಸ್ಟಾಲಿನ್ ಅವರು ನಟ ವಿಜಯ್ ಎದುರು ಸೋತಿರುವುದು ಅಚ್ಚರಿಯ ಬೆಳವಣಿಗೆ ಎಂದು ವರದಿ ಮಾಡಿವೆ.

