ರಾಯಪುರ: ಛತ್ತೀಸಗಢದ ಬಲೋಡಬಜಾರ್-ಭಟಪಾರ ಜಿಲ್ಲೆಯ ಕಾಡಿನಲ್ಲಿ ಅಪರೂಪದ ಭಾರತೀಯ ದೈತ್ಯ ಅಳಿಲು ಕಾಣಿಸಿಕೊಂಡಿದೆ ಎಂದು ಅರಣ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮೇ 16 ರಿಂದ 22 ರವರೆಗೆ ದೇವಪುರ ಅರಣ್ಯ ಪ್ರದೇಶದಲ್ಲಿ ನಡೆದ ಬೇಸಿಗೆ ಶಿಬಿರದ ಭಾಗವಾಗಿ ಆಯೋಜಿಸಲಾದ ಪಕ್ಷಿ ವೀಕ್ಷಣೆಯ ಹಾದಿಯಲ್ಲಿ ಈ ದೃಶ್ಯ ದಾಖಲಾಗಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ಧಮ್ಶಿಲ್ ಗನ್ವೀರ್ ತಿಳಿಸಿದ್ದಾರೆ.
ಮಲಬಾರ್ ದೈತ್ಯ ಅಳಿಲು ಎಂದೂ ಕರೆಯಲ್ಪಡುವ ಅಪರೂಪದ ವೃಕ್ಷ ಅಳಿಲನ್ನು ಬಲೋಡಬಜಾರ್ ಮೂಲದ ಪ್ರಕೃತಿ ಮತ್ತು ಪಕ್ಷಿ ಉತ್ಸಾಹಿ ಹೇಮಂತ್ ವರ್ಮಾ ಗುರುತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇವಪುರ ಅರಣ್ಯದಲ್ಲಿ ದೈತ್ಯ ಅಳಿಲು ಪತ್ತೆಯಾಗಿರುವುದು ಈ ಪ್ರದೇಶದ ಶ್ರೀಮಂತ ಜೀವವೈವಿಧ್ಯತೆ ಮತ್ತು ಆರೋಗ್ಯಕರ ಅರಣ್ಯ ಪರಿಸರ ವ್ಯವಸ್ಥೆಯ ಸಕಾರಾತ್ಮಕ ಸಂಕೇತವೆಂದು ಗನ್ವೀರ್ ಹೇಳಿದ್ದಾರೆ.
ವೈಜ್ಞಾನಿಕವಾಗಿ 'ರತುಫಾ ಇಂಡಿಕಾ' ಎಂದು ಕರೆಯಲ್ಪಡುವ ದೈತ್ಯ ಅಳಿಲು ಭಾರತದಲ್ಲಿ ಕಂಡುಬರುವ ಅತಿದೊಡ್ಡ ಮರ ವಾಸಿ ಅಳಿಲುಗಳಲ್ಲಿ ಒಂದಾಗಿದೆ. ಸಾಮಾನ್ಯ ಅಳಿಲುಗಳಿಗಿಂತ ಹೆಚ್ಚು ದೊಡ್ಡದಾದ ಇದು ತನ್ನ ಬಾಲವನ್ನು ಒಳಗೊಂಡಂತೆ ಸುಮಾರು ಮೂರು ಅಡಿ ಉದ್ದದವರೆಗೆ ಬೆಳೆಯುತ್ತದೆ ಎಂದು ಅವರು ಹೇಳಿದ್ದಾರೆ.
ಈ ಅಳಿಲು ಕಡುಗೆಂಪು, ಕಪ್ಪು, ಕಂದು ಮತ್ತು ಕೆನೆ ಬಣ್ಣಗಳ ಗಮನಾರ್ಹ ಮಿಶ್ರಣಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ, ಅದನ್ನು ಸುಲಭವಾಗಿ ಗುರುತಿಸಬಹುದು ಎಂದು ಅಧಿಕಾರಿ ಹೇಳಿದ್ದಾರೆ.
ಈ ಪ್ರಭೇದದ ಅಳಿಲು ಸಂಪೂರ್ಣ ವೃಕ್ಷಪ್ರಿಯ ಸ್ವಭಾವವನ್ನು ಹೊಂದಿದ್ದು, ತನ್ನ ಜೀವನದ ಬಹುಪಾಲು ಸಮಯವನ್ನು ಎತ್ತರದ ಮರಗಳ ಮೇಲೆ ಕಳೆಯುತ್ತದೆ ಎಂದು ಗನ್ವೀರ್ ಹೇಳಿದ್ದಾರೆ. ಇದು ನೆಲದ ಮೇಲೆ ಬರುವುದು ವಿರಳ. ಒಂದು ಮರದಿಂದ ಮತ್ತೊಂದು ಮರಕ್ಕೆ 20 ಅಡಿಗಳಷ್ಟು ಜಿಗಿಯುವ ಸಾಮರ್ಥ್ಯ ಹೊಂದಿದೆ.
ಭಾರತೀಯ ದೈತ್ಯ ಅಳಿಲನ್ನು ವನ್ಯಜೀವಿ ರಕ್ಷಣೆ ಕಾಯ್ದೆ 1972ರ ಶೆಡ್ಯೂಲ್ 2ರ ಅಡಿ ರಕ್ಷಿಸಲಾಗಿದೆ. ಈ ಪ್ರಭೇದದ ಅಳಿಲನ್ನು ಬೇಟೆಯಾಡುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.

