ಭಾರತದ ರೂಪಾಯಿ ತನ್ನ ಕುಸಿತದ ಓಟವನ್ನು ಮುಂದುವರಿಸುತ್ತಲೇ ಇದೆ. ಏಷ್ಯಾದ ಇತರ ರಾಷ್ಟ್ರಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್ ಕರೆನ್ಸಿಗಳದ್ದೂ ಇದೆ ಕಥೆ. ಇಂಡೋನೇಷ್ಯಾದ ಕರೆನ್ಸಿ ಕಥೆ ಅಧೋಗತಿ. 1997ರ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಅತ್ಯಂತ ಕಠಿಣ ದಿನಗಳಲ್ಲಿದ್ದಕ್ಕಿಂತಲೂ ಅದು ಹೆಚ್ಚು ದುರ್ಬಲಗೊಂಡಿದೆ.
ಹೌದು.... ಪಶ್ಚಿಮ ಏಷ್ಯಾದ ಯುದ್ಧವು, ತೈಲ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಏಷ್ಯಾದ ದೇಶಗಳಲ್ಲಿ ಈಗಾಗಲೇ ತೈಲ ಬೆಲೆಗಳು ಗಗನಕ್ಕೇರುವಂತೆ ಮಾಡಿದೆ. ಇಂಧನ ವೆಚ್ಚಗಳ ಏರಿಕೆ ಮತ್ತು ಸುರಕ್ಷಿತ ಹೂಡಿಕೆಯ ಹುಡುಕಾಟದಲ್ಲಿ ಹೂಡಿಕೆದಾರರು ಅಮೆರಿಕದ ಡಾಲರ್ನತ್ತ ಮುಖ ಮಾಡುತ್ತಿರುವುದರಿಂದ ಆ ದೇಶಗಳ ಕರೆನ್ಸಿಗಳ ಮೌಲ್ಯವು ತೀವ್ರವಾಗಿ ಕುಸಿಯುತ್ತಿದೆ.
ಈ ಕುಸಿತವನ್ನು ತಡೆಯಲು, ಆಯಾ ದೇಶಗಳ ಕೇಂದ್ರ ಬ್ಯಾಂಕುಗಳು ಕರೆನ್ಸಿ ಮಾರುಕಟ್ಟೆಯಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲೆಂದೇ ತಾವು ವರ್ಷಗಳಿಂದ ಶೇಖರಿಸಿಟ್ಟಿದ್ದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಳಸಿಕೊಳ್ಳುತ್ತಿವೆ.
ಡಾಲರ್ಗಳನ್ನು ಮಾರಿ ಸ್ಥಳೀಯ ಕರೆನ್ಸಿಗಳನ್ನು ಖರೀದಿಸುವ ಮೂಲಕ ಕೇಂದ್ರ ಬ್ಯಾಂಕುಗಳು ಕರೆನ್ಸಿ ಮೌಲ್ಯ ಸಂಪೂರ್ಣವಾಗಿ ಪಾತಾಳಕ್ಕೆ ಕುಸಿಯುವುದನ್ನು ತಾತ್ಕಾಲಿಕವಾಗಿ ತಪ್ಪಿಸಿದರೂ, ಯುದ್ಧದ ಬಗೆಗಿನ ಅನಿಶ್ಚಿತತೆ ಆತಂಕ ಹೆಚ್ಚಿಸಿದೆ. ಒಂದು ವೇಳೆ ಯುದ್ಧ ದೀರ್ಘಕಾಲದವರೆಗೆ ಮುಂದುವರಿದರೆ ಕೇಂದ್ರ ಬ್ಯಾಂಕುಗಳು ಎಷ್ಟು ದಿನಗಳವರೆಗೆ ತಮ್ಮ ಮೀಸಲು ನಿಧಿಯನ್ನು ಕರಗಿಸುತ್ತಾ ಹೋಗಬಹುದು ಎಂಬ ಪ್ರಶ್ನೆ ಎದ್ದಿದೆ.
ಶಾಪವಾದ ಹೊರ್ಮುಜ್
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಪ್ರಮುಖ ಹಡಗು ಮಾರ್ಗ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿತ್ತು. ಇದು ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ತೈಲ ಬೆಲೆಗಳು ಸುಮಾರು ಶೇ 50 ರಷ್ಟು ಏರಿಕೆಯಾಗಿದ್ದು, ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ ಸುಮಾರು 105 ಡಾಲರ್ನಂತೆ ವಹಿವಾಟು ನಡೆಸುತ್ತಿದೆ.
ಜನಸಾಮಾನ್ಯರ ಮೇಲೆ ಹೊರೆ
ದುರ್ಬಲಗೊಳ್ಳುತ್ತಿರುವ ಕರೆನ್ಸಿಗಳ ಪರಿಣಾಮವನ್ನು ಏಷ್ಯಾದಾದ್ಯಂತದ ಸಾಮಾನ್ಯ ಜನರು ಅನುಭವಿಸಲು ಪ್ರಾರಂಭಿಸಿದ್ದಾರೆ. ವಿಶೇಷವಾಗಿ ಇಂಧನ ಬೆಲೆ ಏರಿಕೆಯಿಂದ ತೀವ್ರವಾಗಿ ತತ್ತರಿಸಿರುವ ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ನಂತಹ ದೇಶಗಳಲ್ಲಿ ಇದರ ಪ್ರಭಾವ ಹೆಚ್ಚಾಗಿದೆ. ಕರೆನ್ಸಿಗಳ ಮೌಲ್ಯ ಕುಸಿದಾಗ, ಇಂಧನದಿಂದ ಹಿಡಿದು ಆಹಾರ ವಸ್ತುಗಳು ದುಬಾರಿಯಾಗುತ್ತವೆ. ಬಡ ಕುಟುಂಬಗಳು ತಮ್ಮ ಆದಾಯದ ಬಹುದೊಡ್ಡ ಪಾಲನ್ನು ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವುದರಿಂದ, ಈ ಬೆಲೆ ಏರಿಕೆಯು ಅವರ ಭವಿಷ್ಯದ ಮೇಲೆ ತೀವ್ರ ಹೊಡೆತ ನೀಡುತ್ತದೆ.
1997ರ ಆರ್ಥಿಕ ಬಿಕ್ಕಟ್ಟಿನ ಕಹಿ ನೆನಪುಗಳನ್ನು ಹೊಂದಿರುವ ಏಷ್ಯಾದ ಹಲವು ರಾಷ್ಟ್ರಗಳು, ವಿದೇಶಿ ವಿನಿಮಯ ಮಾರುಕಟ್ಟೆಯ ಏರಿಳಿತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಆ ಸಮಯದಲ್ಲಿ ಡಾಲರ್ ಎದುರು ಏಷ್ಯಾದ ಹಲವು ಕರೆನ್ಸಿಗಳು ತೀವ್ರ ಹೊಡೆತಕ್ಕೆ ಸಿಲುಕಿದ್ದವು.
ಬಡ್ಡಿದರ ಹೆಚ್ಚಳ ಅನಿವಾರ್ಯ
ಇವುಗಳ ಜೊತೆಗೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಅಮೆರಿಕ ಬಾಂಡ್ ಮಾರುಕಟ್ಟೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಈ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ. 30 ವರ್ಷಗಳ ಯುಎಸ್ ಟ್ರೆಜರಿ ಬಾಂಡ್ಗಳ ಮೇಲಿನ ಆದಾಯ ಗರಿಷ್ಠ ಮಟ್ಟವಾದ ಶೇ 5 ಕ್ಕಿಂತ ಹೆಚ್ಚಾಗಿದೆ. ಇದು ಎರಡು ದಶಕಗಳ ಅಧಿಕ. ಇದರಿಂದ ಡಾಲರ್ ಮೌಲ್ಯ ಹೆಚ್ಚಿದ್ದು, ಮಾರುಕಟ್ಟೆಗಳಿಂದ ಹಣ ಹೊರ ಹರಿವನ್ನು ವೇಗಗೊಳಿಸಿದೆ.
ಇದು ಏಷ್ಯಾದ ಕೆಲವು ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ಕರೆನ್ಸಿಯನ್ನು ರಕ್ಷಿಸಲು ಮತ್ತು ಸ್ಥಳೀಯ ಬಾಂಡ್ಗಳ ಬೇಡಿಕೆಯನ್ನು ಹೆಚ್ಚಿಸಲು ಬಡ್ಡಿ ದರಗಳನ್ನು ಹೆಚ್ಚಿಸಬೇಕೇ? (ಇದರಿಂದ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗುತ್ತದೆ) ಅಥವಾ ಈಗಾಗಲೇ ಒತ್ತಡದಲ್ಲಿರುವ ಆರ್ಥಿಕತೆಯನ್ನು ಇತರ ಮಾರ್ಗಗಳ ಮೂಲಕ ರಕ್ಷಿಸಲು ಪ್ರಯತ್ನಿಸಬೇಕೇ? ಎಂಬ ಗೊಂದಲ ಮೂಡಿದೆ.
ಈ ಇಕ್ಕಟ್ಟಿನಿಂದ ಪಾರಾಗಲು ಇಂಡೋನೇಷ್ಯಾದ ಕೇಂದ್ರ ಬ್ಯಾಂಕ್ ಎರಡು ವರ್ಷಗಳಲ್ಲೇ ಮೊದಲ ಬಾರಿಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಕರೆನ್ಸಿಯನ್ನು ಸ್ಥಿರಗೊಳಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಈ ಕ್ರಮ ಕೈಗೊಂಡಿರುವುದಾಗಿ ಗವರ್ನರ್ ಪೆರ್ರಿ ವಾರ್ಜಿಯೊ ತಿಳಿಸಿದ್ದಾರೆ.
ಇಷ್ಟೆಲ್ಲಾ ಕ್ರಮ ತೆಗೆದುಕೊಂಡರೂ ಇಂಡೋನೇಷ್ಯಾದ ಕರೆನ್ಸಿ ರುಪಿಯಾ, ಡಾಲರ್ ಎದುರು 18 ಸಾವಿರಕ್ಕೆ ಕುಸಿದಿದೆ. 'ಇದು ಸಾಮಾನ್ಯ ಪರಿಸ್ಥಿತಿಯಲ್ಲ. ನಾವು ನಮ್ಮ ಸಂಪೂರ್ಣ ಶಕ್ತಿಯನ್ನು ಬಳಸುತ್ತಿದ್ದೇವೆ. ನಮ್ಮಲ್ಲಿ ಸಾಕಷ್ಟು ಪ್ರಮಾಣ ವಿದೇಶಿ ವಿನಿಮಯ ಮೀಸಲು ಇದೆ' ಎಂದು ವಾರ್ಜಿಯೊ ತಿಳಿಸಿದ್ದಾರೆ.
ಇಂಡೋನೇಷ್ಯಾ ಮಾತ್ರವಲ್ಲ ಏಷ್ಯಾದ ಅತಿದೊಡ್ಡ ಆರ್ಥಿಕತೆಗಳು ಸಹ ಈ ಒತ್ತಡವನ್ನು ಅನುಭವಿಸುತ್ತಿವೆ. ಜಪಾನ್ ವಿಷಯಕ್ಕೆ ಬಂದರೆ, ಡಾಲರ್ ಎದುರು ಕುಸಿಯುತ್ತಿರುವ 'ಯೆನ್' ಅನ್ನು ಬಲಪಡಿಸಲು ಜಪಾನ್ ಕಳೆದ ತಿಂಗಳಿನಿಂದ ಶತ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಸುಮಾರು 63 ಬಿಲಿಯನ್ ಡಾಲರ್ ಹಣವನ್ನ ವ್ಯಯಿಸಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಪ್ರಯತ್ನಗಳು 'ಯೆನ್' ಚೇತರಿಸಿಕೊಳ್ಳಲು ಸಹಕಾರಿಯಾಗಿದ್ದವು. ಆದರೆ ಎರಡು ವಾರಗಳಲ್ಲೇ ಮತ್ತೆ ಕುಸಿತ ಕಂಡು, ತಾನು ಗಳಿಸಿದ್ದ ಅರ್ಧದಷ್ಟು ಮೌಲ್ಯವನ್ನು ಕಳೆದುಕೊಂಡಿತು.
ಕುಸಿತದ ಹಾದಿಯಲ್ಲಿ ರೂಪಾಯಿ
ಭಾರತದ ವಿಷಯಕ್ಕೆ ಬಂದರೆ, ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಕ್ರಮಗಳನ್ನು ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಸೇರಿದಂತೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಮೂಲಕ 'ದೇಶಭಕ್ತಿ' ಪ್ರದರ್ಶಿಸಲು ಭಾರತೀಯರಿಗೆ ಕರೆ ನೀಡಿದ್ದಾರೆ.
ವಿದೇಶ ಪ್ರವಾಸ ಮುಂದೂಡುವುದು, ಮನೆಯಿಂದಲೇ ಕೆಲಸ ಮಾಡುವುದು, ಅಡುಗೆ ಅನಿಲದ ಬಳಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಇಂಧನದ ಬೇಡಿಕೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯರನ್ನು ಒತ್ತಾಯಿಸಿದ್ದಾರೆ. ಅಮೂಲ್ಯ ಲೋಹಗಳನ್ನು ವಿದೇಶಗಳಿಂದ ಖರೀದಿಸುವುದನ್ನು ತಡೆಯಲು, ಭಾರತ ಸರ್ಕಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನೂ ದುಪ್ಪಟ್ಟುಗೊಳಿಸಿದೆ.
'ಪ್ರಸ್ತುತ ಪರಿಸ್ಥಿತಿಯಲ್ಲಿ, ನಾವು ವಿದೇಶಿ ವಿನಿಮಯವನ್ನು ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು' ಎಂದು ಪ್ರಧಾನಿ ಮೋದಿ ಅವರು ಇತ್ತೀಚೆಗೆ ಹೇಳಿದ್ದರು.
ವಿದೇಶಿ ಹೂಡಿಕೆದಾರರು ಭಾರತದಿಂದ ಹಣವನ್ನು ಹಿಂತೆಗೆದುಕೊಂಡು ಅದನ್ನು ವಿದೇಶಿ ಮಾರುಕಟ್ಟೆಗಳಿಗೆ ವರ್ಗಾಯಿಸುತ್ತಿರುವುದರಿಂದ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಇಂಧನ ಬೆಲೆ ಏರಿಕೆಯು ಆಮದು ವೆಚ್ಚವನ್ನು ಹೆಚ್ಚಿಸುತ್ತಿರುವಾಗ ದೇಶದೊಳಗೆ ಹರಿಯುವ ಹಣದ ಪ್ರಮಾಣವು ಕಡಿಮೆಯಾಗುತ್ತಿದೆ.
ವಿದೇಶಿ ವಿನಿಯಮ ಮೀಸಲು: ಒಂದು ಲೆಕ್ಕಾಚಾರ
ಇರಾನ್ ಯುದ್ಧದ ಪ್ರಾರಂಭದಿಂದಲೂ ಇಂಡೋನೇಷ್ಯಾ ಮತ್ತು ಫಿಲಿಪ್ಪೀನ್ಸ್ನ ವಿದೇಶಿ ವಿನಿಮಯ ಮೀಸಲು ನಿಧಿಯು ತಲಾ 8 ಬಿಲಿಯನ್ ಡಾಲರ್ನಷ್ಟು ಕುಸಿದಿದೆ. ಮೇ ತಿಂಗಳ ಆರಂಭದ ವೇಳೆಗೆ ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯು ಸುಮಾರು ಶೇ 4ರಷ್ಟು, ಅಂದರೆ ಸುಮಾರು 27 ಬಿಲಿಯನ್ ಡಾಲರ್ ಕುಸಿದಿದೆ.
ಈ ಕರೆನ್ಸಿಗಳು ಮತ್ತೆ ಚೇತರಿಸಿಕೊಳ್ಳಲು ಪ್ರಾರಂಭಿಸಬೇಕಾದರೆ ಇರಾನ್ ಯುದ್ಧ ಕೊನೆಗೊಳ್ಳಲೇಬೇಕು ಎನ್ನುತ್ತಾರೆ ಅರ್ಥಶಾಸ್ತ್ರಜ್ಞೆ ಅಲಿಸಿಯಾ ಗಾರ್ಸಿಯಾ ಹೆರೆರೊ.
ಆದರೆ, ಇಂಧನ ಬೆಲೆ ಏರಿಕೆ ಆಘಾತ ದೀರ್ಘಕಾಲಿನ ಪರಿಣಾಮಗಳನ್ನು ಬೀರಬಹುದು ಎಂದು ಹಣಕಾಸು ಮಾರುಕಟ್ಟೆ ವಿಶ್ಲೇಷಕ ರೆಹಮಾನ್ ಹೇಳಿದ್ದಾರೆ.
1997 ರ ಆರ್ಥಿಕ ಬಿಕ್ಕಟ್ಟಿನ ನಂತರ, ಏಷ್ಯಾ ದೇಶಗಳು ಭವಿಷ್ಯದ ಆಘಾತಗಳನ್ನು ಉತ್ತಮವಾಗಿ ಎದುರಿಸಲು ದೊಡ್ಡ ಮೀಸಲು ನಿಧಿಯನ್ನು ನಿರ್ಮಿಸಿಕೊಂಡಿದ್ದಾವೆ. ಆದರೆ, ಪಶ್ಚಿಮ ಏಷ್ಯಾ ಯುದ್ಧವು ಮತ್ತೊಂದು ರೀತಿಯ ದೌರ್ಬಲ್ಯವನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.
ತೈಲ ಮತ್ತು ಡಾಲರ್ ಮೇಲಿನ ತನ್ನ ಅವಲಂಬನೆಯನ್ನು ಏಷ್ಯಾದ ರಾಷ್ಟ್ರಗಳು ಕಡಿಮೆ ಮಾಡಲು ಸಾಧ್ಯವೆ ಎಂಬುದು ಈಗಿರುವ ಮುಖ್ಯ ಪ್ರಶ್ನೆ ಎಂದು ಅವರು ಹೇಳಿದ್ದಾರೆ. ಈ ಪ್ರಶ್ನೆಯನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.

