ನವದೆಹಲಿ (PTI): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜತೆ ನಂಟು ಹೊಂದಿರುವ ಶಹಜಾದ್ ಭಟ್ಟಿ ಗುಂಪಿಗೆ ಸೇರಿದ ವ್ಯಕ್ತಿಗಳ ಮೂಲಕ ದೆಹಲಿಯ ಐತಿಹಾಸಿಕ ದೇವಸ್ಥಾನ, ದೆಹಲಿ-ಸೋನಿಪತ್ ಹೆದ್ದಾರಿಯ ಜನಪ್ರಿಯ 'ಡಾಬಾ' ಮತ್ತು ಹರಿಯಾಣದ ಸೇನಾ ಶಿಬಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದು ತನಿಖೆ ವೇಳೆ ಗೊತ್ತಾಗಿದೆ.
ದೆಹಲಿ ಪೊಲೀಸರ ವಿಶೇಷ ತಂಡವು 'ಗ್ಯಾಂಗ್ ಬಸ್ಟ್ ಆಪರೇಷನ್ 2.0' ಅಡಿಯಲ್ಲಿ ವಿವಿಧ ರಾಜ್ಯಗಳಿಂದ ಬಂಧಿಸಿದ್ದ ಒಂಬತ್ತು ಆರೋಪಿಗಳ ವಿಚಾರಣೆ ವೇಳೆ ಈ ಸಂಗತಿ ಬಹಿರಂಗಗೊಂಡಿದೆ.
'ಆರೋಪಿಗಳ ಪೈಕಿ ಒಬ್ಬ ದೆಹಲಿಯ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ. ಆವರಣದ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ವ್ಯಕ್ತಿಗಳಿಗೆ ಕಳುಹಿಸಿದ್ದ' ಎಂದು ಪೊಲೀಸ್ ಅಧಿಕಾರಿ ಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
'ದೇವಸ್ಥಾನದಲ್ಲಿ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ, ಅರೆಸೇನಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡಿ ಜನರಲ್ಲಿ ಆತಂಕ ಸೃಷ್ಟಿಸುವುದು ಈ ಗುಂಪಿನ ಉದ್ದೇಶವಾಗಿತ್ತು ಎಂದರು.

