ಶ್ರೀನಗರ: ಮಾದಕವಸ್ತು ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ಅವರ ಮನೆಗಳನ್ನು ಧ್ವಂಸ(ಬುಲ್ಡೋಜರ್ ಕ್ರಮ) ಮಾಡುವ ಮೂಲಕ ಅಮಾಯಕ ಕುಟುಂಬ ಸದಸ್ಯರಿಗೆ ಏಕೆ ತೊಂದರೆ ನೀಡುತ್ತಿದ್ದೀರಿ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರಶ್ನಿಸಿದ್ದಾರೆ.
ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಇಂದು (ಶನಿವಾರ) ನಡೆದ ಪಕ್ಷದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದವರನ್ನು ಜೈಲಿಗೆ ಕಳುಹಿಸಿ. ಹಣ ಪಡೆದು ಅಂತಹವರನ್ನು ಬಿಡುಗಡೆ ಮಾಡುವ ಪೊಲೀಸ್ ಸಿಬ್ಬಂದಿಯನ್ನು ಮೊದಲು ಪ್ರಶ್ನಿಸಿ. ಅದನ್ನು ಬಿಟ್ಟು ಅವರ ಮನೆಗಳನ್ನು ಏಕೆ ಕೆಡವುತ್ತಿದ್ದೀರಿ?. ಇದರಲ್ಲಿ ಅವರ ಕುಟುಂಬ ಸದಸ್ಯರ ತಪ್ಪೇನಿದೆ ಎಂದು ಕೇಳಿದ್ದಾರೆ.
ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಒಮರ್ ಅವರೇ ಜನರು ಬುಲ್ಡೋಜರ್ ಬಾಬಾ ಅವರನ್ನು ಇಷ್ಟಪಟ್ಟಿದ್ದರೆ, ನಿಮಗೆ ಏಕೆ ಮತ ಹಾಕುತ್ತಿದ್ದರು?. ನೀವು ಅವರನ್ನು ರಕ್ಷಿಸುತ್ತೀರಿ ಎಂಬ ನಂಬಿಕೆಯಿಂದ 50 ಶಾಸಕರನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

