ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಟಿವಿಕೆ ವರಿಷ್ಠ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವು ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಹಾಡಿನೊಂದಿಗೆ ಆರಂಭಗೊಂಡಿತು. ತಮಿಳುನಾಡಿನಲ್ಲಿ ಅಧಿಕೃತ ಸರಕಾರಿ ಕಾರ್ಯಕ್ರಮಗಳು ರಾಜ್ಯದ ನಾಡಗೀತೆಯಾದ 'ತಮಿಳ್ ತಾಯ್ ವಾಳ್ತು' ಹಾಡಿನೊಂದಿಗೆ ಆರಂಭಗೊಳ್ಳುತ್ತವೆ.
ಆದರೆ ಇದೀಗ ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ'ನ ಪೂರ್ಣ ಆವೃತ್ತಿಯನ್ನು ಹಾಡಬೇಕೆಂಬ ಕೇಂದ್ರ ಸರಕಾರದ ನಿರ್ದೇಶನಕ್ಕೆ ಅನುಗುಣವಾಗಿ ವಿಜಯ್ ಅವರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭವು 'ವಂದೇ ಮಾತರಂ' ಹಾಡಿನೊಂದಿಗೆ ಆರಂಭಗೊಂಡಿತು. ಬಳಿಕ ರಾಷ್ಟ್ರಗೀತೆ 'ಜನಗಣಮನ' ಹಾಗೂ ಆನಂತರ 'ತಮಿಳ್ ತಾಯ್ ವಾಳ್ತು' ಹಾಡನ್ನು ಹಾಡಲಾಯಿತು.
ವಿಜಯ್ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ತಮಿಳುನಾಡಿನ ನಾಡಗೀತೆ 'ತಮಿಳ್ ತಾಯ್ ವಾಳ್ತು'ಗೆ ಮೂರನೇ ಸ್ಥಾನ ನೀಡಿರುವುದನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡಿಯನ್ ಅವರು ರವಿವಾರ ಆಕ್ಷೇಪಿಸಿದ್ದಾರೆ.
''ಈ ಲೋಪಕ್ಕೆ ಯಾರು ಹೊಣೆಗಾರರೆಂಬುದನ್ನು ತಮಿಳುನಾಡು ಸರಕಾರ ವಿವರಿಸಬೇಕಾಗಿದೆ. 'ತಮಿಳ್ ತಾಯ್ ವಾಳ್ತು'ಗೆ ಸರ್ವೋಚ್ಚ ಸ್ಥಾನ ನೀಡುವುದನ್ನು ಟಿವಿಕೆ ಖಾತರಿಪಡಿಸಬೇಕಿದೆ. ಭವಿಷ್ಯದಲ್ಲಿ ಇಂತಹ ಯಾವುದೇ ಲೋಪ ಮುಂದುವರಿಯಲು ಅವಕಾಶ ನೀಡಬಾರದು'' ಎಂದು ಅವರು ಹೇಳಿದ್ದಾರೆ.
ಸೋಮವಾರ ನಡೆಯಲಿರುವ ವಿಧಾನಸಭಾ ಅಧಿವೇಶನದ ಆರಂಭದಲ್ಲಿ 'ತಮಿಳ್ ತಾಯ್ ವಾಳ್ತು' ಹಾಡನ್ನು ಮೊದಲು ಹಾಡುವಂತೆ ಸ್ಪೀಕರ್ ಖಾತರಿಪಡಿಸಬೇಕೆಂದು ವೀರಪಾಂಡಿಯನ್ ಆಗ್ರಹಿಸಿದರು.
ಕೇವಲ ಒಂದು ದಿನದ ಮೊದಲು ಟಿವಿಕೆ ಸರಕಾರಕ್ಕೆ ಬೆಂಬಲ ಘೋಷಿಸಿದ್ದ ಸಿಪಿಐ, ಸರಕಾರ ರಚನೆಯ ಬೆನ್ನಲ್ಲೇ ವಿಜಯ್ ವಿರುದ್ಧ ಎತ್ತಿರುವ ಮೊದಲ ಆಕ್ಷೇಪ ಇದಾಗಿದೆ.

