ಇಸ್ಲಾಮಾಬಾದ್: ದೀರ್ಘಕಾಲದ ಏಕಾಂತ ವಾಸ ಮತ್ತು ಕಣ್ಣಿನ ಸೋಂಕಿನಿಂದ ಬಳಲುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಮಾನವೀಯತೆಯ ಆಧಾರದ ಮೇಲೆ ತಮ್ಮನ್ನು ಬಿಡುಗಡೆ ಮಾಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ತಮಗೆ ಮತ್ತು ಪತ್ನಿ ಬುಶ್ರಾ ಬೀಬಿಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಇಮ್ರಾನ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ಅವರ ಪರ ವಕೀಲ ಸಲ್ಮಾನ್ ಸಫ್ದರ್ ಈ ಮನವಿ ಸಲ್ಲಿಸಿದರು.
'ಇಮ್ರಾನ್ ಖಾನ್ ಅವರ ದೃಷ್ಟಿ ಸಾಮರ್ಥ್ಯವು ಶೇ 15ಕ್ಕೆ ಕುಸಿದಿದ್ದು, ಒಂದು ಕಣ್ಣು ಬಹುತೇಕ ಕಾಣಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಈ ಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಅದಿಯಾಲಾ ಜೈಲಿನಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಳಿಲ್ಲದ ಕಾರಣ ಅವರನ್ನು ಪದೇ ಪದೇ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ' ಎಂದು ಸಫ್ದರ್ ನ್ಯಾಯಾಲಯಕ್ಕೆ ವಿವರಿಸಿದರು.
ಇಮ್ರಾನ್ ಖಾನ್ ಅವರನ್ನು ಏಕಾಂತ ವಾಸದಲ್ಲಿ ಇಟ್ಟಿರುವುದನ್ನು ಪ್ರಶ್ನಿಸಿದ ವಕೀಲರು, ಶಿಕ್ಷೆಯನ್ನು ಅಮಾನತ್ತಿನಲ್ಲಿಡುವಂತೆ ಕೋರಿದರು. ಈ ಪ್ರಕರಣದಲ್ಲಿ 2023ರ ಆಗಸ್ಟ್ 5ರಂದು ಇಮ್ರಾನ್ ಅವರಿಗೆ 14 ವರ್ಷ ಮತ್ತು ಬುಶ್ರಾ ಬೀಬಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅಲ್-ಖಾದಿರ್ ಟ್ರಸ್ಟ್ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಲಂಚವಾಗಿ ಪಡೆದ ಆರೋಪ ಇಮ್ರಾನ್ ಮೇಲಿದೆ. ಆದರೆ, ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಇಮ್ರಾನ್, ಇದೊಂದು ರಾಜಕೀಯ ಪ್ರೇರಿತ ಕೇಸ್ ಎಂದು ಪ್ರತಿಪಾದಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.
ಚಿನ್ನ, ವಜ್ರದ ಆಭರಣಗಳು ಸೇರಿ ಸೌದಿ ಸರ್ಕಾರ 2021ರಲ್ಲಿ ಪಾಕಿಸ್ತಾನಕ್ಕೆ ನೀಡಿದ ದುಬಾರಿ ಉಡುಗೊರೆಗಳನ್ನು ಮಾರಿ ಭ್ರಷ್ಟಾಚಾರ ಎಸಗಿದ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (73) ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಇಲ್ಲಿನ ನ್ಯಾಯಾಲಯ 17 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ತೆಹ್ರೀಕ್ ಇ-ಇನ್ಸಾಫ್ ಪಕ್ಷದ ಸ್ಥಾಪಕ ಇಮ್ರಾನ್ ಖಾನ್ 2023ರಿಂದ ರಾವಲ್ಪಿಂಡಿ ಅಡಿಯಾಲ ಜೈಲಿನಲ್ಲಿದ್ದಾರೆ.

