ಲಖನೌ: ಗಂಗಾನದಿಗೆ ಮಾಂಸಾಹಾರದ ಆಹಾರದ ತ್ಯಾಜ್ಯವನ್ನು ಎಸೆಯುವುದರಿಂದ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಾರಾಣಸಿಯಲ್ಲಿ ದೋಣಿಯೊಂದರಲ್ಲಿ ನಡೆದ ಇಫ್ತಾರ್ ಪಾರ್ಟಿಯ ಸಂದರ್ಭದಲ್ಲಿ ನದಿಗೆ ತ್ಯಾಜ್ಯ ಎಸೆದ ಆರೋಪ ಹೊತ್ತಿರುವ ಐವರು ಆರೋಪಿಗಳಿಗೆ ನ್ಯಾಯಮೂರ್ತಿ ರಾಜೀವ್ ಲೋಚನ್ ಶುಕ್ಲಾ ಅವರು ಜಾಮೀನು ಮಂಜೂರು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ 'ಆರೋಪಿಗಳು ತಮ್ಮ ಕೃತ್ಯಗಳಿಗಾಗಿ ಕ್ಷಮೆಯಾಚಿಸಿದ್ದಾರೆ ಮತ್ತು ಅವರ ಕುಟುಂಬದವರೂ ಸಮಾಜಕ್ಕೆ ಉಂಟಾದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ' ಎಂದು ಹೇಳಿದ್ದಾರೆ.
'ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, ಆರೋಪಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದು, ಈಗಾಗಲೇ ಅವರು (ಆರೋಪಿಗಳಿಗೆ) ಅನುಭವಿಸಿದ ಬಂಧನದ ಅವಧಿ ಮತ್ತು ಕ್ಷಮೆಯಾಚನೆಯನ್ನು ಪರಿಗಣಿಸಿ, ಜಾಮೀನು ನೀಡಲು ಇದು ಸೂಕ್ತ ಪ್ರಕರಣವಾಗಿದೆ' ಎಂದು ಶುಕ್ಲಾ ತಿಳಿಸಿದ್ದಾರೆ.
ಮೇ 15ರಂದು ಹೊರಡಿಸಿದ ಆದೇಶದಲ್ಲಿ ನ್ಯಾಯಮೂರ್ತಿ ಶುಕ್ಲಾ ಅವರು ಆರೋಪಿ ಅರ್ಜಿದಾರರಾದ ಮೊಹಮ್ಮದ್ ಆಜಾದ್ ಅಲಿ, ಮೊಹಮ್ಮದ್ ತಹ್ಸೀಮ್, ನಿಹಾಲ್ ಅಫ್ರಿದಿ, ಮೊಹಮ್ಮದ್ ತೌಸೀಫ್ ಅಹ್ಮದ್ ಮತ್ತು ಮೊಹಮ್ಮದ್ ಅನಾಸ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
'ಇಫ್ತಾರ್ ಪಾರ್ಟಿಯ ವೇಳೆ ಮುಸ್ಲಿಂ ಸಮುದಾಯದ ಸದಸ್ಯರು ಮಾಂಸಾಹಾರವನ್ನು ಸೇವಿಸಿದ್ದಾರೆ. ನಂತರ ಅದರ ತ್ಯಾಜ್ಯವನ್ನು ಗಂಗಾನದಿಗೆ ಎಸೆದಿದ್ದಾರೆ ಎಂಬ ಆರೋಪವಿದೆ. ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ' ಎಂದೂ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ.
2026ರ ಮಾರ್ಚ್ 17ರಿಂದ ಜೈಲಿನಲ್ಲಿದ್ದ ಅರ್ಜಿದಾರರು ತಮ್ಮ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಯಾವುದೇ ಕೃತ್ಯ ಎಂದಿಗೂ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಅವರು ಮೇ 15ರಂದು ಮೂವರು ಆರೋಪಿಗಳಾದ ಮೊಹಮ್ಮದ್ ಸಮೀರ್, ಮೊಹಮ್ಮದ್ ಅಹ್ಮದ್ ರಜಾ ಮತ್ತು ಮೊಹಮ್ಮದ್ ಫೈಜಾನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದರು.
ಬಿಜೆಪಿ ಯುವ ಮೋರ್ಚಾದ ವಾರಾಣಸಿ ಘಟಕದ ಅಧ್ಯಕ್ಷ ರಜತ್ ಜೈಸ್ವಾಲ್ ನೀಡಿದ ದೂರಿನ ಆಧಾರದ ಮೇಲೆ ಮಾರ್ಚ್ 16ರಂದು ಎಫ್ಐಆರ್ ದಾಖಲಿಸಲಾಗಿತ್ತು. ಈ ಘಟನೆಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಆರಾಧನಾ ಸ್ಥಳವಾದ ನದಿಯನ್ನು ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆ ಕೆರಳಿಸುವುದು ಮುಂತಾದ ಅಂಶಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಗಳು ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಏಪ್ರಿಲ್ 1ರಂದು ವಾರಾಣಸಿಯ ಸೆಷನ್ಸ್ ನ್ಯಾಯಾಲಯವು ಆರೋಪಿಗಳು ಸಾಮಾಜಿಕ ಸಾಮರಸ್ಯ ಕದಡುವ ಉದ್ದೇಶವನ್ನು ಹೊಂದಿರುವಂತೆ ಕಂಡುಬರುತ್ತಿದ್ದಾರೆ ಎಂದು ಹೇಳಿ ಜಾಮೀನು ನಿರಾಕರಿಸಿತ್ತು.

