ತಿರುವನಂತಪುರ: ಯುಡಿಎಫ್ ಮೈತ್ರಿಕೂಟದ ಮಿತ್ರಪಕ್ಷವಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಒಂದು ಸಹೋದರ ಪಕ್ಷ ಇದ್ದಂತೆ. ಕೇರಳಂನ ಜಾತ್ಯತೀತ ಸ್ವರೂಪವನ್ನು ರಕ್ಷಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇರಳಂ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ವಿ.ಡಿ ಸತೀಶನ್ ಹೇಳಿದ್ದಾರೆ.
ಐಯುಎಂಎಲ್ನ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಹೈಕಮಾಂಡ್ ವಿ.ಡಿ.ಸತೀಶನ್ ಅವರನ್ನು ಕೇರಳಂನ ಮುಂದಿನ ಸಿಎಂ ಆಗಿ ಘೋಷಿಸಿದೆ ಎಂದು ಬಿಜೆಪಿ ಸೇರಿದಂತೆ ವಿಪಕ್ಷಗಳು ಟೀಕಿಸುತ್ತಿರುವ ನಡುವೆಯೇ, ಸತೀಶನ್ ಈ ಹೇಳಿಕೆ ನೀಡಿದ್ದಾರೆ.
'ಐಯುಎಂಎಲ್ ಯುಡಿಎಫ್ ಮೈತ್ರಿಕೂಟದ ಪ್ರಮುಖ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ. ನಾವು ಹಿಂದೆಂದೂ ಕಾಣದ ರೀತಿಯಲ್ಲಿ 'ಟೀಮ್ ಯುಡಿಎಫ್' ಆಗಿ ಕೆಲಸ ಮಾಡಿದ್ದೇವೆ. ಐಯುಎಂಎಲ್ ರಾಜ್ಯ ಅಧ್ಯಕ್ಷ ಸಯ್ಯಿದ್ ಸಾದಿಕ್ ಅಲಿ ಶಿಹಾಬ್ ತಂಗಳ್ ಅವರ ಬೆಂಬಲದೊಂದಿಗೆ ನಾವು ಸದನದ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಹೋರಾಟ ನಡೆಸಿದ್ದೇವೆ' ಎಂದಿದ್ದಾರೆ.
ಯುಡಿಎಫ್ ಮೈತ್ರಿಕೂಟ ಪ್ರಬಲ ಜಾತ್ಯತೀತ ನಿಲುವನ್ನು ತಳೆದಿದ್ದು, ಅದನ್ನು ರಾಜ್ಯದ ಜನರು ಅನುಮೋದಿಸಿದ್ದಾರೆ. ಆ ನಿಲುವಿನ ಹಿಂದೆ ತಂಗಳ್ ಅವರ ಶಕ್ತಿಯಿತ್ತು. ಕೋಮು ಪ್ರಚೋದನೆ ಮೂಲಕ ಜನರನ್ನು ವಿಭಜಿಸಲು ಹಲವು ಶಕ್ತಿಗಳು ಯತ್ನಿಸಿದವು. ಆದರೆ, ಐಯುಎಂಎಲ್ ಮತ್ತು ತಂಗಳ್ ತಳೆದ ನಿಲುವು ನನಗೆ ಆಶ್ಚರ್ಯ ಮೂಡಿಸಿತು' ಎಂದು ಸತೀಶನ್ ವಿವರಿಸಿದ್ದಾರೆ.
'ಬಾಬರಿ ಮಸೀದಿ ಧ್ವಂಸದ ಅವಧಿಯಲ್ಲೂ ಐಯುಎಂಎಲ್ ನಾಯಕತ್ವವು ಇಂತಹುದೇ ಜಾತ್ಯತೀತ ನಿಲುವನ್ನು ತಳೆದಿತ್ತು. ಐಯುಎಂಎಲ್ ಸದಾ ಯುಡಿಎಫ್ನ ಜಾತ್ಯತೀತ ನಿಲುವನ್ನು ಬೆಂಬಲಿಸುತ್ತಾ ಬಂದಿದೆ. ಆ ಪಕ್ಷದ ಯಾವುದೇ ನಾಯಕರು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿಲ್ಲ' ಎಂದು ಅವರು ಹೇಳಿದ್ದಾರೆ.
ತನ್ನ ಪ್ರಭಾವ ಹೆಚ್ಚಿರುವ ಕ್ಷೇತ್ರಗಳಲ್ಲಿ ಹಲವು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳುವಲ್ಲಿ ಐಯುಎಂಎಲ್ ಪ್ರಮುಖ ಪಾತ್ರ ವಹಿಸಿದೆ. ಜತೆಗೆ, ಇತರ ಮಿತ್ರಪಕ್ಷಗಳು ಸಹ ಯುಡಿಎಫ್ನಾದ್ಯಂತ ಪರಸ್ಪರ ಬೆಂಬಲಿಸಿಕೊಂಡಿವೆ ಎಂದಿದ್ದಾರೆ.
ಸರ್ಕಾರದಲ್ಲೂ ಐಯುಎಂಎಲ್ ಜತೆ ಇಂತಹದೇ ಸಮನ್ವಯ ಮುಂದುವರಿಯಲಿದ್ದು, ರಾಜ್ಯದ ಅಭಿವೃದ್ಧಿಗಾಗಿ ಒಟ್ಟಾಗಿ ಶ್ರಮಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಖಾತೆ ಹಂಚಿಕೆ ಕುರಿತು ಮಾತನಾಡಿದ ಸತೀಶನ್, ಪ್ರಾಥಮಿಕ ಹಂತದ ಚರ್ಚೆಗಳು ಪೂರ್ಣಗೊಂಡಿವೆ. ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವೇಳೆ ಇದ್ದಂತಹ ಸೌಹಾರ್ದಯುತ ಮನೋಭಾವ ಖಾತೆ ಹಂಚಿಕೆಯಲ್ಲೂ ಇರಲಿದೆ' ಎಂದಿದ್ದಾರೆ.
140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳಲ್ಲಿ ಗೆಲುವು ಗಳಿಸಿದೆ. ಈ ಪೈಕಿ ಕಾಂಗ್ರೆಸ್ 63 ಶಾಸಕರನ್ನು ಹೊಂದಿದೆ. ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) 22, ಕೇರಳ ಕಾಂಗ್ರೆಸ್ (ಕೆಇಸಿ) ಎಂಟು ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ (ಆರ್ಎಸ್ಪಿ) ಮೂರು ಶಾಸಕರನ್ನು ಹೊಂದಿವೆ.

