ಗುರುಗ್ರಾಮ: 'ಬಿಜೆಪಿಯು ಹರಿಯಾಣ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮತ ಕಳ್ಳತನದಿಂದ ಅಧಿಕಾರ ಹಿಡಿದಿದ್ದು, ಈಗ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಅದೇ ಕೆಲಸ ಮಾಡಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನಿನ್ನೆ (ಶುಕ್ರವಾರ) ಸಂಜೆ ಹರಿಯಾಣ ಕಾಂಗ್ರೆಸ್ ನಾಯಕ ಬ್ರಿಜೇಂದ್ರ ಸಿಂಗ್ ಅವರ 'ಸದ್ಭಾವ ಯಾತ್ರೆ'ಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
'ಮತಗಳನ್ನು ಕದಿಯಲು ಬಿಜೆಪಿ ವ್ಯವಸ್ಥೆಯೊಂದನ್ನು ಸೃಷ್ಟಿಸಿಕೊಂಡಿದೆ. ಲಕ್ಷಾಂತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮತ್ತು ಲಕ್ಷಾಂತರ ಹೆಸರುಗಳನ್ನು ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಚುನಾವಣಾ ಆಯೋಗವು ಅವರ ನಿಯಂತ್ರಣದಲ್ಲಿದೆ. ತಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದಾರೆ' ಎಂದು ಹೇಳಿದ್ದಾರೆ.
'ಆದರೆ ಇದೆಲ್ಲದಕ್ಕೂ ಕೊನೆಯಿದೆ... ಅವರ ಸಮಯ ಬರಲಿದೆ.. ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿ ಈ ದೇಶದ ವಿಮಾನ ನಿಲ್ದಾಣಗಳು, ಬಂದರುಗಳು, ಮೂಲಸೌಕರ್ಯಗಳು, ವಿದ್ಯುತ್ ಸ್ಥಾವರಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗಿದೆ. ಈಗ ನಿಕೋಬಾರ್ ದ್ವೀಪವನ್ನು ಅದಾನಿಗೆ ಮಾರಾಟ ಮಾಡಲು ಹೊರಟಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಾನು ಬರೆದು ಕೊಡುತ್ತೇನೆ ಕೇಳಿ... ನರೇಂದ್ರ ಮೋದಿ ಅವರು ಹೆಚ್ಚು ಕಾಲ ಆಡಳಿತದಲ್ಲಿ ಉಳಿಯಲು ಸಾಧ್ಯವಿಲ್ಲ. ಏಕೆಂದರೆ ಜನರ ಮನಸ್ಸಿನಲ್ಲಿ ಅಷ್ಟೊಂದು ಆಕ್ರೋಶವಿದೆ. ನೀವು ಎಷ್ಟೇ ಮತಗಳನ್ನು ಕದ್ದರೂ, ಜನರ ಮನಸ್ಸಿನಲ್ಲಿರುವ ಆಕ್ರೋಶವನ್ನು ಎದುರಿಸಲೇಬೇಕು. ಭಾರತದಲ್ಲಿ ಏನಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ' ಎಂದು ಹೇಳಿದ್ದಾರೆ.

