ಅಕ್ರಮ ವಲಸೆ ಹಾಗೂ ಹಿಮ್ಮೆಟ್ಟಿಸುವಿಕೆ ಪ್ರಕ್ರಿಯೆ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಬಂಧದಲ್ಲಿ ಸದಾ ಮುಳ್ಳು ಎನಿಸಿದೆ. ಇದಕ್ಕೂ ಮುನ್ನ ಮಂಗಳವಾರ ಬಿಎನ್ಪಿಯ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಖಲೀಲುರ್ ರಹಮಾನ್, "ಅಂಥ ಘಟನೆಗಳು ಸಂಭವಿಸಿದರೆ ಬಾಂಗ್ಲಾದೇಶ ಸೂಕ್ತ ಕ್ರಮ ಕೈಗೊಳ್ಳುತ್ತದೆ" ಎಂದು ಹೇಳಿದ್ದಾಗಿ ವರದಿಯಾಗಿತ್ತು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ 2024ರ ಪದಚ್ಯುತಿ ಬಳಿಕ ಭಾರತದಲ್ಲಿ ಆಶ್ರಯ ಪಡೆದಿದ್ದು, ಅವರ ಗಡೀಪಾರು ಮನವಿಯನ್ನು ಭಾರತ ಪುರಸ್ಕರಿಸದಿರುವ ಬಗ್ಗೆ ಬಾಂಗ್ಲಾ ಆತಂಕ ವ್ಯಕ್ತಪಡಿಸಿದ್ದು, ಶಂಕಿತ ಅಕ್ರಮ ವಲಸಿಗರ ಹಿಮ್ಮೆಟ್ಟಿಸುವಿಕೆ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಹೊಸದಿಲ್ಲಿಯಲ್ಲಿ ಬಾಂಗ್ಲಾದೇಶದ ಪತ್ರಕರ್ತರ ನಿಯೋಗದ ಜತೆಗಿನ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, "ನಾವು ಪರೀಕ್ಷೆಯ ಸನ್ನಿವೇಶ ಎದುರಿಸುತ್ತಿದ್ದೇವೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮರುಚಾಲನೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಉಭಯ ದೇಶಗಳ ನಡುವೆ 40ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳು ಇದ್ದು, ವ್ಯಾಪಾರ, ಗಡಿ ನಿರ್ವಹಣೆ, ಕಾನ್ಸುಲರ್ ವಿವಾದ ಮತ್ತು ಜಲ ಒಪ್ಪಂದಗಳು ಇದರಲ್ಲಿ ಸೇರಿವೆ. ತೀಸ್ತಾ ನೀರು ಹಂಚಿಕೆಗೆ ಸಂಬಂಧಿಸಿದಂತೆ 2011ರಲ್ಲಿ ಮಾಡಿಕೊಂಡ ಒಪ್ಪಂದವನ್ನು ಮಮತಾ ಬ್ಯಾನರ್ಜಿ ಸರ್ಕಾರ ತಡೆಹಿಡಿದಿರುವುದು ಕೂಡಾ ಇದರಲ್ಲಿ ಸೇರಿದೆ.

