ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳ ನಡುವೆಯೇ, ಡಿಎಂಕೆಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.
ಈ ಬೆನ್ನಲ್ಲೇ, 'ಇಂಡಿಯಾ' ಮೈತ್ರಿಕೂಟದ ಅಸ್ತಿತ್ವವೇ ಅಂತ್ಯಗೊಂಡಿದೆ ಎಂದು ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಜನಮತ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲ. ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲ ಒದಗಿಸಿಕೊಳ್ಳುವ ಉದ್ದೇಶದಿಂದ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ಟಿವಿಕೆ ಪಡೆದುಕೊಂಡಿದೆ. ಇದರಿಂದ ರಾಜ್ಯದ ಚುನಾವಣೋತ್ತರ ರಾಜಕೀಯ ಸಮೀಕರಣದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ್, "ಕಾಂಗ್ರೆಸ್ ದೀರ್ಘಕಾಲದ ಮಿತ್ರಪಕ್ಷದ ಬೆನ್ನಿಗೆ ಚೂರಿ ಇರಿದಂತಾಗಿದೆ. ಇದರಿಂದ ಇಂಡಿಯಾ ಮೈತ್ರಿಕೂಟ ಮುಗಿದ ಅಧ್ಯಾಯವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಡಪಕ್ಷಗಳು ಹಾಗೂ ವಿಸಿಕೆ ಮುಂದೆಯೂ ಡಿಎಂಕೆ ಮೈತ್ರಿಕೂಟದಲ್ಲೇ ಉಳಿಯಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಪಕ್ಷಗಳು ತಮ್ಮ ನಾಯಕತ್ವದೊಂದಿಗೆ ಚರ್ಚಿಸಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲಿವೆ. ಅವರು ಯಾವ ತೀರ್ಮಾನ ಕೈಗೊಂಡರೂ ನಾವು ಅದನ್ನು ಗೌರವಿಸುತ್ತೇವೆ. ಯಾವುದೇ ನಿರ್ಧಾರಕ್ಕೆ ನಾವು ಒತ್ತಾಯಿಸುವುದಿಲ್ಲ" ಎಂದರು.
ಕಾಂಗ್ರೆಸ್ ಪಕ್ಷವು ಟಿವಿಕೆ ಪರವಾಗಿ ನಿಲ್ಲುವ ಮೂಲಕ ತಮಿಳುನಾಡಿನಲ್ಲಿ ಹೊಸ ಮೈತ್ರಿ ರಾಜಕಾರಣಕ್ಕೆ ನಾಂದಿ ಹಾಡಿದಂತಾಗಿದೆ. ಈ ಬೆಳವಣಿಗೆ ರಾಜ್ಯ ರಾಜಕೀಯದ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿಯೂ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಕುರಿತು ಚರ್ಚೆಗೆ ಕಾರಣವಾಗಿದೆ.

