ಮುಂಬೈ: 'ರಾಜಕೀಯ ಭಿನ್ನಾಭಿಪ್ರಾಯಗಳೇನೆ ಇರಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು' ಎಂದು ಎನ್ಸಿಪಿ (ಎಸ್ಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಮಂಗಳವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ರಾಷ್ಟ್ರ ಹಿತಾಸಕ್ತಿಗಾಗಿ ಒಟ್ಟಾಗಿ ಕೆಲಸ ಮಾಡುವ ಅವಕಾಶ ಸಿಕ್ಕಾಗಲೆಲ್ಲಾ ಪ್ರತಿಯೊಬ್ಬರೂ ಕೈಜೋಡಿಸಬೇಕು ಮತ್ತು ದೇಶದ ಘನತೆಯನ್ನು ಬಲಪಡಿಸಲು ಸಹಾಯ ಮಾಡಬೇಕು' ಎಂದು ಹೇಳಿದ್ದಾರೆ.
'ಇಂದಿರಾ ಗಾಂಧಿ, ಪಿ. ವಿ. ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರಂತಹ ನಾಯಕರು ಯಾವಾಗಲೂ ದೇಶದ ಭವಿಷ್ಯ ಮತ್ತು ಕೀರ್ತಿಯನ್ನು ತಮ್ಮ ನಾಯಕತ್ವದ ಸಂಕೇತವಾಗಿ ಇಟ್ಟುಕೊಂಡಿದ್ದರು' ಎಂದು ಹೇಳಿದ್ದಾರೆ.
ನೆಹರೂ ಭೇಟಿ ಸ್ಮರಿಸಿದ ಪವಾರ್:
'ನಾನು 18ನೇ ವಯಸ್ಸಿನಲ್ಲಿರುವಾಗ ನಮ್ಮ ಊರು ಬಾರಾಮತಿಯಲ್ಲಿ ಯಾವುದೇ ಕಾಲೇಜು ಇಲ್ಲದ ಕಾರಣ, ಉನ್ನತ ಶಿಕ್ಷಣ ಪಡೆಯಲು ಬಾರಾಮತಿಯಿಂದ ಪುಣೆಗೆ ಬರಬೇಕಾಯಿತು. ಈ ವೇಳೆ ಚಳವಳಿಗಳಲ್ಲಿ ಭಾಗವಹಿಸುವ ಮೂಲಕ ಪುಣೆಯ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಆಯ್ಕೆಯಾದೆ. ನಂತರ ಮಹಾರಾಷ್ಟ್ರ ಯೂತ್ ಕಾಂಗ್ರೆಸ್ ಘಟಕವನ್ನು ಮುನ್ನೆಡೆಸಿದ್ದೇನೆ' ಎಂದು ತಮ್ಮ ಆರಂಭಿಕ ರಾಜಕೀಯ ಪಯಣವನ್ನು ಮೆಲುಕು ಹಾಕಿದ್ದಾರೆ.
'ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಜವಾಹರಲಾಲ್ ನೆಹರೂ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ. ಇದು ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ರೈತರು ಮತ್ತು ಯುವಕರ ಸಮಸ್ಯೆಗಳ ಕುರಿತು ಹಲವಾರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಹೋಗಿದ್ದೆ. ಆದರೆ, ನೆಹರೂ ಅವರು ಎದುರಿಗೆ ಬಂದಾಗ, ಎಲ್ಲವನ್ನೂ ಮರೆತುಬಿಟ್ಟಿದ್ದೆ' ಎಂದು ಪವಾರ್ ಹೇಳಿದ್ದಾರೆ.

