ತಿರುವನಂತಪುರ: ಕೇರಳದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕುರಿತು ಕಾಂಗ್ರೆಸ್ನಲ್ಲಿ ಹಗ್ಗಜಗ್ಗಾಟ ಮುಂದುವರಿದಿದೆ. ಆ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪೋಸ್ಟ್ವೊಂದನ್ನು ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿರುವ ಮೂವರು ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ನೆಟ್ಟಿಗರೊಬ್ಬರು ಎಕ್ಸ್ (X) ಖಾತೆಯಲ್ಲಿ, 'ಕೇರಳ ಬಿಜೆಪಿ ಮತ್ತು ರಾಷ್ಟ್ರೀಯ ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೆ.ಸಿ. ವೇಣುಗೋಪಾಲ್ ಕೇರಳದಲ್ಲೇ ಇರಲಿ ಎಂಬುದು ರಾಜ್ಯ ಘಟಕದ ಆಸೆ. ಆದರೆ ಅವರು ದೆಹಲಿಯಲ್ಲೇ ಇರಲಿ ಎಂಬುದು ರಾಷ್ಟ್ರೀಯ ಘಟಕದ ಆಶಯ' ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನು ಹಂಚಿಕೊಂಡ ರಾಜೀವ್ ಚಂದ್ರಶೇಖರ್, 'ನನ್ನ ಪ್ರತಿಕ್ರಿಯೆ ಇಷ್ಟೇ.. ಇದು ನಿಜವೋ ಸುಳ್ಳೋ ಎಂಬುದನ್ನು ನಾನು ದೃಢಪಡಿಸುವುದೂ ಇಲ್ಲ ಅಥವಾ ನಿರಾಕರಿಸುವುದೂ ಇಲ್ಲ' ಎಂದು ಹೇಳಿದರು.
ಕೇರಳ ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಹುದ್ದೆಗಾಗಿ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಹೈಕಮಾಂಡ್ ಮೇಲೆ ಒತ್ತಡ ಹೇರಲು ಮೂರೂ ಬಣಗಳು ಕಸರತ್ತು ನಡೆಸುತ್ತಿವೆ. ಆದರೆ, ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕತ್ವ ಇರುವಾಗಲೇ ಬಿಜೆಪಿ ಈ ರೀತಿ ವ್ಯಂಗ್ಯವಾಡಿರುವುದು ಕಾಂಗ್ರೆಸ್ಗೆ ಮುಜುಗರ ತರಿಸಿದೆ.

