ತಿರುವನಂತಪುರ: 'ಕೇರಳಂನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧರಿಸಿದಾಗ ಪಕ್ಷದ ಎಲ್ಲ ಕಾರ್ಯಕರ್ತರು ಇದನ್ನು ಒಪ್ಪಿಕೊಳ್ಳಲೇಬೇಕು' ಎಂದು ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಭಾನುವಾರ ಹೇಳಿದರು.
ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಖ್ಯಮಂತ್ರಿ ಆಯ್ಕೆಯ ಮುನ್ನ ಚರ್ಚೆಯು ನಮ್ಮ ಪಕ್ಷದಲ್ಲಿ ಸಾಮಾನ್ಯ ಪ್ರಕ್ರಿಯೆ.
ನಿರ್ಧಾರ ಹೊರಬರಲಿ. ಈ ನಿರ್ಧಾರವನ್ನು ಒಪ್ಪಿಕೊಳ್ಳುವುದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿ' ಎಂದರು.
'ಕಾಂಗ್ರೆಸ್ನಲ್ಲಿ ಹೊಸ ಪೀಳಿಗೆಯ ನಾಯಕತ್ವ ಉದಯಿಸುತ್ತಿದೆ. ಈ ಹೊತ್ತಿನಲ್ಲಿ ವಿವಾದ ಏಳುವುದು ಸಹಜ. ಕೆ. ಕರುಣಾಕರನ್, ಉಮ್ಮನ್ ಚಾಂಡಿ ಮತ್ತು ಎ.ಕೆ. ಆಯಂಟನಿ ಅವರ ಕಾಲಘಟ್ಟದಲ್ಲಿ ವಿವಾದ ಇರಲಿಲ್ಲ. ಯಾಕೆಂದರೆ, ಅವರ ನಾಯಕತ್ವ ಹಾಗಿತ್ತು. ಈಗ ಹೊಸ ನಾಯಕರು ಬಂದಿದ್ದಾರೆ. ಅಭಿಪ್ರಾಯ ಭೇದ ಇದ್ದೇ ಇರುತ್ತದೆ. ಆದರೆ, ಕಾಂಗ್ರೆಸ್ ಇವೆಲ್ಲವನ್ನೂ ಪರಿಹರಿಸಲಿದೆ' ಎಂದು ಹೇಳಿದರು.
'ಎಲ್ಲ ಶಾಸಕರ ಮತ್ತು ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಅಂತಿಮ ಹೈಕಮಾಂಡ್ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಇದು ಪಕ್ಷದ ಪರಂಪರೆ. ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ' ಎಂದರು.

