ತಿರುವನಂತಪುರಂ: ಕೇರಳಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಆರು ದಿನಗಳು ಕಳೆದರೂ, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಇನ್ನೂ ಅಂತಿಮಗೊಳಿಸಿಲ್ಲ. ಇದು, ಕಾರ್ಯಕರ್ತರು, ಮಿತ್ರಪಕ್ಷಗಳು ಮಾತ್ರವಲ್ಲದೆ, ಸಾರ್ವಜನಿಕರಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ.
140 ಸದಸ್ಯ ಬಲದ ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದೇ ಪ್ರಕಟವಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) 102 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕಾಂಗ್ರೆಸ್ 63 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಆದಾಗ್ಯೂ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಈವರೆಗೆ ಸಾಧ್ಯವಾಗಿಲ್ಲ.
ಸದ್ಯ ಸಿಎಂ ಗಾದಿ ರೇಸ್ನಲ್ಲಿರುವ ಮೂವರು ನಾಯಕರು ಮಾಡಿಕೊಂಡಿರುವ ಮನವಿಯಂತೆ, ಅವರ ಬೆಂಬಲಿಗರು ಪೋಸ್ಟರ್ ಅಭಿಯಾನ ನಡೆಸುವುದನ್ನು ಶನಿವಾರವೇ ನಿಲ್ಲಿಸಿದ್ದಾರೆ. ಆದರೆ, ಸಾಮಾಜಿಕ ವಲಯದಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದೆ. ಕಾಂಗ್ರೆಸ್ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.
'ಪಕ್ಷಕ್ಕೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಯುಡಿಎಫ್ ಸಾಧಿಸಿರುವ ಅಭೂತಪೂರ್ವ ಗೆಲುವಿನ ಸಂಭ್ರಮ ಪಕ್ಷದ ನಾಯಕರ ಕಚ್ಚಾಟದಿಂದಾಗಿ ಮಸುಕಾಗಿದೆ. ಮುಖ್ಯಮಂತ್ರಿ ಆಯ್ಕೆ ವಿಳಂಬ ಮುಂದುವರಿದರೆ, ಇನ್ನಷ್ಟು ಹಾನಿಯಾಗುತ್ತದೆ' ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ. ಆದರೆ, ಈ ವಿಚಾರವಾಗಿ ಆಗುತ್ತಿರುವ ವಿಳಂಬಕ್ಕೆ ಎಐಸಿಸಿ ನಾಯಕರೇ (ಹೈಕಮಾಂಡ್) ಕಾರಣ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ.
ಕಳೆದ ಐದು ವರ್ಷಗಳಿಂದ ಹಾಗೂ ಚುನಾವಣೆಯಲ್ಲಿ ಯುಡಿಎಫ್ ಅನ್ನು ಮುನ್ನಡೆಸಿರುವ ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಹಿಂದಿನ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದ ಅವರಿಗೆ, ಮಿತ್ರ ಪಕ್ಷಗಳ ಬೆಂಬಲವೂ ಇದೆ.
ಈ ನಡುವೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತಲ ಅವರು ಪೈಪೋಟಿಗೆ ಇಳಿದಿರುವುದು ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
'ಕಾಂಗ್ರೆಸ್ ಶಾಸಕರ ಪೈಕಿ ಹೆಚ್ಚಿನವರು ವೇಣುಗೋಪಾಲ್ಗೆ ಬೆಂಬಲ ನೀಡುತ್ತಿದ್ದಾರೆ. ಒಂದು ವೇಳೆ ಅವರೇನಾದರೂ ವಿಧಾನಸಭೆ ಪ್ರವೇಶಿಸುವ ಸಲುವಾಗಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರು ಪ್ರತಿನಿಧಿಸುತ್ತಿರುವ ಆಲಪ್ಪುಳ ಕ್ಷೇತ್ರವು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಇದರಿಂದಾಗಿ, ವೇಣುಗೋಪಾಲ್ ಅವರಿಗೆ ಹಿನ್ನಡೆಯಾಗಲಿದೆ' ಎಂಬುದಾಗಿ ಮಿತ್ರಪಕ್ಷಗಳ ನಾಯಕರು ಅಂದಾಜಿಸಿದ್ದಾರೆ.
ವೇಣುಗೋಪಾಲ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ, ಕೇರಳಂ ಕಾಂಗ್ರೆಸ್ ಸಂಸದರ ಅಸಮಾಧಾನ ಸ್ಫೋಟಗೊಳ್ಳಬಹುದು. ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಸೂಚಿಸಿದ್ದ ಎಐಸಿಸಿ ನಾಯಕರು, ಚುನಾವಣೆಯಲ್ಲಿ ಸ್ಪರ್ಧಿಸುವ ನಿಟ್ಟಿನಲ್ಲಿ ಹಲವರು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದರು.
ವೇಣುಗೋಪಾಲ್ ಮತ್ತು ಸತೀಶನ್ ಅವರು ಪಟ್ಟು ಬಿಗಿಗೊಳಿಸುತ್ತಿರುವುದರ ನಡುವೆ ರಮೇಶ್ ಚೆನ್ನಿತಲ ಅವರಿಗೆ ಲಾಭವಾದರೂ ಅಚ್ಚರಿಯೇನಿಲ್ಲ ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಚೆನ್ನಿತಲ ಅವರು, ಈ ಹಿಂದೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು.

