ತಿರುವನಂತಪುರಂ: 'ಕೇರಳಂ ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ' ಎಂದು ಕಾಂಗ್ರೆಸ್ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಸೋಮವಾರ ತಿಳಿಸಿದ್ದಾರೆ.
'ನಾವು ಹೇಳಬೇಕಾದ್ದನ್ನೆಲ್ಲಾ ಹೈಕಮಾಂಡ್ಗೆ ಹೇಳಿಯಾಗಿದೆ. ಅವರು ಎಲ್ಲವನ್ನು ಕೇಳಿದ್ದಾರೆ. ಅಂತಿಮವಾಗಿ ಅವರೇ ನಿರ್ಧರಿಸಬೇಕು' ಎಂದು ನವದೆಹಲಿಯಿಂದ ಕೇರಳಂಗೆ ವಾಪಸ್ ಬಂದಿರುವ ಚೆನ್ನಿತ್ತಲ ತಿಳಿಸಿದ್ದಾರೆ.
'ಪ್ರಜಾಪ್ರಭುತ್ವದ ಪ್ರಕ್ರಿಯೆಯ ಭಾಗವಾಗಿ ಅಲ್ಪ ವಿಳಂಬವಾಗಿದೆ. ಆದರೆ ಕಳೆದ ವರ್ಷ ಎಡರಂಗ ತೆಗೆದುಕೊಂಡಷ್ಟು ಸಮಯ ನಾವು ತೆಗೆದುಕೊಂಡಿಲ್ಲ' ಎಂದು ಸಮರ್ಥಿಸಿದ್ದಾರೆ.
ಈ ಸಂಬಂಧ ಬಿಜೆಪಿಯ ಟೀಕೆಗೆ ತಿರುಗೇಟು ನೀಡಿರುವ ಅವರು, 'ಕಾಂಗ್ರೆಸ್ ನಾಗ್ಪುರದ ಸೂಚನೆಗಳ ಮೇರೆಗೆ ಕೆಲಸ ಮಾಡುವ ಪಕ್ಷವಲ್ಲ' ಎಂದು ಹೇಳಿದ್ದಾರೆ.
ಮೇ 4ರಂದು ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದರೂ ಈವರೆಗೆ ಸಿಎಂ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಇದರೊಂದಿಗೆ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ.
ಪಕ್ಷದ ಪರಿಷ್ಠರಾದ ಎಐಸಿಸಿ ಅಧ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾದ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ಅವರೊಂದಿಗೆ ಚರ್ಚಿಸಿದ್ದಾರೆ. ಸಿಎಂ ಆಯ್ಕೆ ಸಂಬಂಧ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಖರ್ಗೆ ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.
140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತ ಗಳಿಸಿತ್ತು. ಆದರೂ ಸಿಎಂ ಆಯ್ಕೆ ವಿಳಂಬಗೊಂಡಿರುವುದು ಕಾಂಗ್ರೆಸ್ ಪಾಳಯದಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಅಭ್ಯರ್ಥಿಗಳ ಬೆಂಬಲಿಗರು ಬೀದಿಗಿಳಿದಿರುವುದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತ್ತು.
ಪ್ರಸ್ತುತ ಕೇರಳಂ ವಿಧಾನಸಭೆಯ ಅವಧಿ ಮೇ 23ರಂದು ಮುಕ್ತಾಯವಾಗಲಿದೆ. ಹಾಗಾಗಿ ಯಾವುದೇ ಆತುರವಿಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

