ವಿಝಿಯನಗರಂ: ಭೋಗಪುರಂ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಅಧಿಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಸಿಬಿ ಬಕೆಟ್ ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಹಿರಿಯರನ್ನು ಎಕ್ಸ್ಕವೇಟರ್ ಯಂತ್ರದ ಮೂಲಕವೇ ಸ್ಥಳಾಂತರಿಸಿದ ಘಟನೆ ಆಂಧ್ರಪ್ರದೇಶದ ವಿಝಿಯನಗರಂ ಜಿಲ್ಲೆಯ ಭೋಗಪುರಂ ಮಂಡಲದ ಬೈರೆಡ್ಡಿಪಾಲೆಂ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದರೂ, ಎಕ್ಸ್ಕವೇಟರ್ ಆಪರೇಟರ್ ಪ್ರತಿಭಟನಾಕಾರರನ್ನು ಜೆಸಿಬಿ ಮೂಲಕ ಸ್ಥಳಾಂತರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ವೇಳೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.
ಭೋಗಪುರಂ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಬೈರೆಡ್ಡಿಪಾಲೆಂ ಗ್ರಾಮದ ಕನಿಷ್ಠ 39 ಕುಟುಂಬಗಳ ಜಮೀನುಗಳನ್ನು ಕೆಲ ತಿಂಗಳ ಹಿಂದೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನ ನಿಯಮಗಳ ಅನ್ವಯ ಸರ್ಕಾರ ಪರಿಹಾರ ಧನ ವಿತರಿಸಿತ್ತು. ಈ ಪೈಕಿ 15 ಕುಟುಂಬಗಳು ಪರಿಹಾರ ಮೊತ್ತ ಸ್ವೀಕರಿಸಿದ್ದರೆ, ಉಳಿದ ಕುಟುಂಬಗಳು ಹೆಚ್ಚುವರಿ ವಸತಿ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಪರಿಹಾರವನ್ನು ನಿರಾಕರಿಸಿದ್ದವು.

